ಮಡಿಕೇರಿ; ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನ ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯತಿಯ ಕೆ. ಕೆ. ಆರ್ ಟಿ. ಎಸ್ಟೇಟ್ ವೀಕ್ಷಿಸಲು ಮೈಸೂರಿನಿಂದ ಬಂದಿದ್ದ ಪ್ರವಾಸಿಗರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಕೊಡಗಿನ ಗಡಿ ಆನೆ ಚೌಕೂರು ಚೆಕ್ಪೋಸ್ಟ್ನಲ್ಲಿ ಕೈಗಳಿಗೆ ಸೀಲ್ ಹಾಕಿದ್ದರೂ, ಸೀಲ್ ಅನ್ನೂ ಲೆಕ್ಕಿಸದೆ ಗೃಹ ಬಂಧನದಲ್ಲಿ ಇರದೇ ದಕ್ಷಿಣ ಕೊಡಗಿನ ಪ್ರವಾಸಿ ತಾಣಗಳಿಗೆ ಓಡಾಡುತ್ತಾ ಮೋಜು ಮಾಡುತ್ತಿದ್ದ ಯುವಕರು ಕಾರಿನ ಹಿಂಭಾಗದಲ್ಲಿ ಎರಡು ಸೈಕಲ್ಗಳನ್ನು ನೇತು ಹಾಕಿಕೊಂಡು ಅಡ್ದಾಡುತ್ತಿದ್ದರು.
ಟೀ ಎಸ್ಟೇಟ್ ಬಳಿ ಸೆಲ್ಫೀ ತೆಗೆದುಕೊಳ್ಳುತ್ತಿದ್ದಾಗ ಇವರನ್ನು ವೀಕ್ಷಿಸಿದ ಸ್ಥಳೀಯರು, ಇವರ ಕೈಗಳಿಗೆ ಹಾಕಿದ್ದ ಸೀಲನ್ನು ಗಮನಿಸಿದರು. ತರಾಟೆಗೆ ತೆಗೆದುಕೊಂಡರು, ನಂತರ ಶ್ರೀಮಂಗಲ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಇನ್ನೂ ಕೂಡ ಕೊಡಗಿನಲ್ಲಿ ಕೊರೊನಾ ಪ್ರಕರಣ ಇಳಿಮುಖವಾಗಿಲ್ಲ. ಆದರೂ ಕೂಡ ಯಾವುದೇ ನಿರ್ಬಂಧವಿಲ್ಲದೆ ಪ್ರವಾಸಿಗರು ಕೊಡಗಿಗೆ ಬರುತ್ತಿರುವುದು ಸ್ಥಳೀಯ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರವಾಸಿಗರ ತಡೆಗೆ ಜನರಿಂದ ತೀವ್ರ ಪ್ರತಿರೋಧ ವ್ಯಕ್ತವಾದ ಬೆನ್ನಲ್ಲೇ ಪೊಲೀಸರು ಆನೆ ಚೌಕೂರ್ ಗೇಟ್ ಸಂಪೂರ್ಣ ಬಿಗಿ ಮಾಡಲಾಗಿದೆ ಹಾಗೂ ಇನ್ನೂ ಬಿಗಿ ಮಾಡುವ ಭರವಸೆಯನ್ನು ನೀಡಿದ್ದಾರೆ. ಹಾಗೇ ಕೇರಳದ ಕೆಲವೊಂದು ವಾಹನಗಳಿಗೆ ನೇರವಾಗಿ ಹೋಗಲು ಅನುಮತಿ ಇದ್ದು ಅದನ್ನು ಚೆಕ್ ಮಾಡಿ ಬಿಡುವುದಾಗಿ ತಿಳಿಸಿದ್ದರು. ಕೇರಳ ವಾಹನ ನೇರವಾಗಿ ಕೇರಳಕ್ಕೆ ಹೋಗದೆ ಅಡ್ಡಾಡುತ್ತಿದ್ದರೆ ಅವರ ಮೇಲೆ ಕ್ರಮಕೈಗೊಳ್ಳುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.