


ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಪ್ರಾರಂಭಗೊಂಡಿದೆ. ಇಂದು ದಸರಾ ಗಜಪಡೆ ಕಾಡಿನಿಂದ ನಾಡಿಗೆ ಪಯಣ ಆರಂಭಿಸಲಿವೆ.
ಬೆಳಿಗ್ಗೆ 10:20 ರಿಂದ 10:45ರೊಳಗಿನ ಶುಭ ಮುಹೂರ್ತದಲ್ಲಿ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಗಜಪಯಣ ಆರಂಭವಾಗಲಿದೆ. ಮೊದಲ ತಂಡದಲ್ಲಿ ಅಭಿಮನ್ಯು ನೇತೃತ್ವದ 9 ಆನೆಗಳು ಮೈಸೂರಿಗೆ ಆಗಮಿಸಲಿವೆ.
ಎರಡನೇ ತಂಡದಲ್ಲಿ 5 ಆನೆಗಳು ಬರಲಿದೆ. ಹೆಚ್ಚುವರಿಯಾಗಿ 4 ಮೀಸಲು ಆನೆಗಳು ಗುರುತು ಕೂಡ ಮಾಡಲಾಗಿದೆ. ನಾಡಿಗೆ ಬರುವ ಈ ಗಜಪಡೆಗೆ ಆ.23 ರಂದು ಮೈಸೂರು ಅರಮನೆಯಲ್ಲಿ ಅದ್ಧೂರಿಯಿಂದ ಸ್ವಾಗತಿಸಲಾಗುತ್ತದೆ.
ಕೊಡಗು ಜಿಲ್ಲೆ ದುಬಾರೆ ಸಾಕಾನೆ ಶಿಬಿರದಿಂದ ಕಂಜನ್, ಧನಂಜಯ, ಗೋಪಿ, ಅನೆಗಳು ಒಂದು ತಿಂಗಳ ಭರ್ಜರಿ ಪೂರ್ವಸಿದ್ಧತೆಯೊಂದಿಗೆ ನಾಳೆ ಮೈಸೂರಿನತ್ತ ಪ್ರಯಾಣ ಬೆಳೆಸಲಿವೆ.
ಆನೆಗಳಿಗೆ ಸಾಕಾನೆ ಶಿಬಿರದಲ್ಲಿ ಸಾಂಪ್ರದಾಯಿಕವಾಗಿ ಗಣಪತಿ ಪೂಜೆಯನ್ನು ನೆರವೇರಿಸಿದ ಸಾಕಾನೆಗಳ ಮಾವುತ, ಕಾವಾಡಿಗಳು ಯಾವುದೇ ವಿಘ್ನ ಬರದಂತೆ ಪೂಜೆ ಸಲ್ಲಿಸಿದರು. ಒಂದು ತಿಂಗಳು ಮೈಸೂರಿನಲ್ಲಿ ವಿಶೇಷ ಆಹಾರ ಹಾಗೂ ತರಬೇತಿ ನಡೆಸಲಿರುವ ದಸರಾ ಆನೆಗಳು ಮೈಸೂರಿಗೆ ಹೊರಟಿವೆ.
ದುಬಾರೆ ಸಾಕಾನೆ ಶಿಬಿರದಿಂದ ದಸರಾ ಆನೆಗಳು ವೀರನಹೊಸಹಳ್ಳಿಗೆ ಕಳುಹಿಸುವ ಸಲುವಾಗಿ ಲಾರಿಗಳಿಗೆ ಹತ್ತಿಸಲಾಯಿತು. ನಾಡದೇವತೆಯ ಹಬ್ಬದಲ್ಲಿ ಪಾಲ್ಗೊಳ್ಳುವ ಮಾವುತ ಕಾವಾಡಿಗಳು ಮಾತಾನಾಡಿ, ದೇವಿಯ ಹಬ್ಬದಲ್ಲಿ ಭಾಗಿಯಾಗಲು ನಿಜವಾಗಿಯೂ ನಾವು ಪುಣ್ಯ ಮಾಡಿದ್ದೇವೆ. ಸಾಕು ಪ್ರಾಣಿಗಳ ಮೂಲಕ ದೇವಿಯ ಸೇವೆಗೆ ಹೋಗುವುದೇ ನಮಗೆ ತುಂಬಾ ಖುಷಿಯ ವಿಚಾರ ಎಂದು ಹರ್ಷ ವ್ಯಕ್ತಪಡಿಸಿದರು