




ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಅತಿಮಹಾರುದ್ರಯಾಗ ಮೇ 2 ನೇ ಶುಕ್ರವಾರದಿಂದ ಮೇ 4 ನೇ ಆದಿತ್ಯವಾರದವರೆಗೆ ನಡೆಯಲಿದ್ದು, ಈ ಪ್ರಯುಕ್ತ ಒಂದು ತಿಂಗಳ ಕಾಲ ರುದ್ರಪಾರಾಯಣ ಕಾರ್ಯಕ್ರಮ ಈ ಕ್ಷೇತ್ರದಲ್ಲಿ ನಿರಂತರ ನಡೆಸಿಕೊಂಡು ಬರಲಾಗಿದೆ. ಅಪಾರ ಕ್ಷೇತ್ರ ಮಹಿಮೆಯನ್ನು ಹೊಂದಿರುವ ಈ ಕ್ಷೇತ್ರಕ್ಕೆ ಕುಂಬಮೇಳದಲ್ಲಿ ಭಾಗವಹಿಸಿದ ಅಘೋರಿ ನಾಗಸಾದು ಗಳ ತಂಡ ಧಿಡೀರ್ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಕ್ಷೇತ್ರಕ್ಕೆ ಧಿಡೀರ್ ಭೇಟಿಯ ಬಗ್ಗೆ ಕ್ಷೇತ್ರದವರು ನಾಗಸಾಧುಗಳ ಬಳಿ ಕೇಳಿದಾಗ ’ನಾವು ಮಹದೇವನ ಅಪ್ಪಣೆ ಮೇರೆಗೆ ಈ ಕ್ಷೇತ್ರಕ್ಕೆ ಬಂದಿದ್ದೇವೆ. ಮುಂದೆ ನಡೆಯುವ ರುದ್ರಯಾಗದ ಸಂದರ್ಭದಲ್ಲಿ ಮಹಾದೇವನ ಅಪ್ಪಣೆಯಾದರೆ ಖಂಡಿತವಾಗಲೂ ನಾವು ಅಥವಾ ನಮ್ಮಂತೆಯೇ ಇರುವ ನಾಗ ಸಾಧುಗಳು ಭೇಟಿ ನೀಡಬಹುದು’ ಎಂಬ ಅಚ್ಚರಿಯ ನುಡಿಗಳೊಂದಿಗೆ ಆಶೀರ್ವಚನ ನೀಡಿದ್ದಾರೆ.

ಶ್ರೀ ರುದ್ರಂ ಶಿವನನ್ನು ಪೂಜಿಸುವ ಅತ್ಯಂತ ಪವಿತ್ರ ಸಾಧನವಾಗಿದೆ. ‘ಅತಿ’ ಎಂದರೆ “ಅಂತಿಮ”. ಶ್ರೀ ಅತಿ ರುದ್ರ ಮಹಾಯಾಗವು ಶಿವನಿಗೆ ಅತ್ಯಂತ ಶಕ್ತಿಶಾಲಿ ಮತ್ತು ಅತ್ಯುನ್ನತ ಪೂಜೆಯಾಗಿದೆ… ಇದನ್ನು ಎಲ್ಲಾ ಜೀವಿಗಳ ಕಲ್ಯಾಣ, ಸಾರ್ವತ್ರಿಕ ಶಾಂತಿ ಮತ್ತು ಸಮೃದ್ಧಿಯನ್ನು ಹೆಚ್ಚಿಸುವ ‘ಲೋಕ ಕಲ್ಯಾಣ’ದ ಉದ್ದೇಶಕ್ಕಾಗಿ ನಡೆಸಲಾಗುತ್ತದೆ.

ಅತಿಮಹಾರುದ್ರಯಾಗ ಸಮಿತಿಯ ಗೌರವಾಧ್ಯಕ್ಷರು ಬಿ.ರಘುನಾಥ ಸೋಮಯಾಜಿ, ಅತಿಮಹಾರುದ್ರಯಾಗ ಸಮಿತಿಯ ಅಧ್ಯಕ್ಷರು ಬ್ರಹ್ಮಾನಂದ ರೆಡ್ಡಿ, ಅತಿಮಹಾರುದ್ರಯಾಗ ಸಮಿತಿಯ ಕಾರ್ಯಾಧ್ಯಕ್ಷರು ಜಗನ್ನಾಥ ಚೌಟರವರ ನೇತೃತ್ವದಲ್ಲಿ ಹಾಗೂ ಸಮಿತಿಯ ಎಲ್ಲಾ ಸದಸ್ಯರ ಮತ್ತು ಸೀಮೆಯ ಭಕ್ತಾದಿಗಳ ಸಹಕಾರದಲ್ಲಿ ಮೇ 2, 3, 4ರಂದು ಅನಂತ್ ಭಟ್ ಓಣಿಬೈಲು ನೇತೃತ್ವದಲ್ಲಿ ಅತಿಮಹಾರುದ್ರ ಯಾಗ ನಡೆಯಲಿದೆ. ಜಿಲ್ಲೆಯಲ್ಲೇ ಪ್ರಪ್ರಥಮ ಬಾರಿಗೆ ಈ ದೇವಸ್ಥಾನದಲ್ಲಿ ನಡೆಯುವ ಅತಿಮಹಾರುದ್ರ ಯಾಗದಲ್ಲಿ 400 ಮಂದಿ ಋತ್ವಿಜರು, 14,641 ಸಂಖ್ಯೆಯಲ್ಲಿ ರುದ್ರ ಪಠಣ ಮಾಡಿ 11 ಕುಂಡಗಳಲ್ಲಿ ಹವಿಸ್ಸು ಸಮರ್ಪಣೆ ನಡೆಸುವ ಮೂಲಕ ಯಾಗ ನಡೆಯಲಿದೆ.








