ಭೋಪಾಲ್: ಕುಡುಕ ಪತಿಯ ದೌರ್ಜನ್ಯದಿಂದ ಬೇಸತ್ತು ಮಕ್ಕಳ ಸಹಿತ ಪತ್ನಿ ಮನೆ ಬಿಟ್ಟು ತವರು ಸೇರಿದ್ದಾಳೆ. ಆದ್ರೆ ಆಕೆಯಿರುವ ಜಾಗಕ್ಕೂ ಬಂದ ಗಂಡ ಹೆಂಡತಿಯ ಮೂಗು ಕಚ್ಚಿ ತುಂಡರಿಸಿರುವ ಘಟನೆ ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ನಡೆದಿದೆ.
ರತ್ಲಾಮ್ ಜಿಲ್ಲೆಯ ಅಲೌಟ್ ನಿವಾಸಿಯಾಗಿದ್ದ ಟೀನಾ ಉಜ್ಜೈನಿಯ ದಿನೇಶ್ ಜತೆ ಮದುವೆ ಮಾಡಿಕೊಂಡಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ದಿನವೂ ಕುಡಿದು ಬಂದು ಪತ್ನಿ, ಮಕ್ಕಳ ಮೇಲೆ ಹಲ್ಲೆ ಮಾಡುತ್ತಿದ್ದ ಎನ್ನಲಾಗಿದ್ದು ಇದರಿಂದ ಬೇಸರಗೊಂಡಿದ್ದ ಟೀನಾ ಮಕ್ಕಳ ಸಹಿತ ತವರಿಗೆ ಹೋಗಿದ್ದಾಳೆ. ಅಲ್ಲಿ ಪತಿಯ ವಿರುದ್ಧ ವಿಚ್ಛೇದನಕ್ಕೂ ಅರ್ಜಿ ಹಾಗಿದ್ದರು. ಕೇಸ್ ವಾಪಸ್ ಪಡೆಯುವಂತೆ ದಿನೇಶ್ ಟೀನಾಳ ತವರು ಮನೆಗೆ ಬಂದು ಕಿರುಕುಳ ನೀಡುತ್ತಿದ್ದ.
ಆಕೆ ಒಪ್ಪದ ಕಾರಣ ಇಬ್ಬರು ಹೆಣ್ಣು ಮಕ್ಕಳ ಎದುರೇ ಪತ್ನಿಯ ಮೂಗನ್ನು ಹಲ್ಲಿನಿಂದ ಕಚ್ಚಿ ತುಂಡರಿಸಿದ್ದಾನೆ. ಮಹಿಳೆ ಮತ್ತು ಮಕ್ಕಳ ಕಿರುಚಿದಾಗ ಅಕ್ಕ ಪಕ್ಕದ ಮನೆಯವರು ಓಡಿ ಬಂದು ಟೀನಾರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ನಂತರ ಪೊಲೀಸರಿಗೆ ದೂರು ದಾಖಲಾಗಿದ್ದು, ಪತಿಯನ್ನು ಬಂಧಿಸಲಾಗಿದೆ. ಸದ್ಯ ಟೀನಾ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.