


ಪಡುಬಿದ್ರಿ: ಪಡುಬಿದ್ರಿ ಕಾಮತ್ ಪೆಟ್ರೋಲ್ ಬಂಕ್ ಬಳಿಯ ಮನೆಯೊಂದಕ್ಕೆ ಮುಂದಿನ ಬಾಗಿಲು ಮುರಿದು ನುಗ್ಗಿದ ಕಳ್ಳರು ಚಿನ್ನದ ಸರ ಸಹಿತ ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ ಕದ್ದು ಪರಾರಿಯಾಗಿದ್ದು, ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.
ಗಣೇಶ್ ಶೆಟ್ಟಿ ಕುಟುಂಬ ಭಾನುವಾರ ಮಧ್ಯಾಹ್ನ ಮನೆಗೆ ಬೀಗ ಹಾಕಿ ಮಂಗಳೂರಿನ ಸಂಬಂಧಿಗಳ ಮನೆಗೆ ಹೋಗಿದ್ದು, ರಾತ್ರಿ ಸುಮಾರು 9:30ರ ಸುಮಾರಿಗೆ ಮರಳಿದಾಗ ಮನೆಯ ಮುಂಭಾಗದ ಬಾಗಿಲು ತೆರೆದಿದ್ದು ಒಳಗೆ ಹೋದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಕಪಾಟಿನಲ್ಲಿದ್ದ ಎಂಟು ಗ್ರಾಂ. ತೂಕದ ಚಿನ್ನದ ಸರ ಹಾಗೂ ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ ನಾಪತ್ತೆಯಾಗಿದೆ.
ಸಿಸಿ ಕ್ಯಾಮಾರದಲ್ಲಿ ಹಚ್ಚಾದ ದಾಖಲೆ ಪರಿಶೀಲನೆ ನಡೆಸಿದಾಗ ರಾತ್ರಿ ಎಂಟುವರೆ ಸುಮಾರಿ ಕಳ್ಳರಿಬ್ಬರು ಮುಖವನ್ನು ಬಟ್ಟೆಯಲ್ಲಿ ಮುಚ್ಚಿಕೊಂಡು ಬಂದು ಎರಡು ಉಕ್ಕಿನ ಸಲಾಖೆಯ ಮೂಲಕ ಬಾಗಿಲ ಚಿಲಕವನ್ನು ಮುರಿದು ಒಳನುಗ್ಗಿದ ದೃಶ್ಯ ಹಚ್ಚಾಗಿದೆ. ಮನೆಯಲ್ಲಿ ಯಾರೂ ಇಲ್ಲದೇ ಇರುವುದನ್ನು ದೃಢಪಡಿಸಿಕೊಂಡೇ ಈ ಕೃತ್ಯ ನಡೆಸಿರುವುದು ಕಳ್ಳರ ನಡವಳಿಕೆಯಿಂದ ತಿಳಿಯಬಹುದಾಗಿದೆ. ಯಾವುದೇ ಅಂಜಿಕೆ- ಹೆದರಿಕೆ ಇಲ್ಲದೆ, ತಾವು ಇಟ್ಟಿರುವ ವಸ್ತುಗಳನ್ನು ಪಡೆಯಲು ಬಂದವರಂತೆ ಬಂದಿರುವುದು ಸಂಶಯಕ್ಕೆ ಪುಷ್ಠಿ ನೀಡಿದೆ.
ಕಳ್ಳತನವಾದ ಚಿನ್ನದೊಂದಿಗೆ ಮನೆ ಮಾಲೀಕ ಗಣೇಶ್ ಶೆಟ್ಟಿಯವರ ಐದು ಪವಾನ್ ತೂಕದ ಚಿನ್ನದ ಸರವೂ ಇತ್ತು. ಮಂಗಳೂರಿಗೆ ಹೊರಟು ಅಂಗಳಕ್ಕೆ ಬಂದ ಅವರಿಗೆ ಏನನ್ನಿಸಿತ್ತೋ ಏನೋ ಮನೆಯೊಳಗೆ ಹೋದವರೆ ತನ್ನ ಚಿನ್ನದ ಸರವನ್ನು ಧರಿಸಿಕೊಂಡು ಹೋಗಿದ್ದರಿಂದ ಅದೃಷ್ಟವಶಾತ್ ಅದು ಉಳಿಯಿತು ಎಂದು ಗಣೇಶ್ ಶೆಟ್ಟಿಯವರು ಹೇಳಿದ್ದಾರೆ.
ಮಂಗಳೂರಿನ ಮನೆಯಲ್ಲಿದ್ದುಕೊಂಡೇ ತನ್ನ ಮನೆಯ ಸಿಸಿ ಕ್ಯಾಮರಾವನ್ನು ಗಮನಿಸುತ್ತಿದ್ದರು. ಸುಮಾರು ಎಂಟು ಇಪ್ಪತ್ತರ ಸುಮಾರಿಗೆ ಇಂಟರ್ ನೆಟ್ ಸಂಪರ್ಕ ಕಡಿತಗೊಂಡಿದೆ. ಆ ಬಳಿಕ ಕೆಲವೇ ಹೊತ್ತಿನಲ್ಲಿ ಕಳ್ಳತನ ನಡೆದಿದ್ದು, ಕಳ್ಳರ ಅದೃಷ್ಟವೋ ಎಂಬಂತೆ ಬೀಸಿದ ಗಾಳಿಗೆ ಮರದ ರೆಂಬೆಯೊಂದು ಕೇಬಲ್ ಮೇಲೆ ಬಿದ್ದು ಕೇಬಲ್ ತುಂಡಾದ ಪರಿಣಾಮ ಇಂಟರ್ ನೆಟ್ ಸಂಪರ್ಕ ಕಡಿತಗೊಂಡಿದೆ. ಇಂಟರ್ ನೆಟ್ ಸಂಪರ್ಕ ಇರುತ್ತಿದ್ದರೆ ಪ್ರಕರಣದ ಚಿತ್ರಣವೇ ಬದಲಾಗುತ್ತಿತ್ತು ಎನ್ನುತ್ತಾರೆ ಮನೆಮಂದಿ.
ಕಳ್ಳತನ ನಡೆದ ವಿಚಾರ ತಿಳಿದು ಕಾಪು ಸರ್ಕಲ್ ಇನ್ಸ್ ಪೆಕ್ಟರ್ ರವರ ಕ್ರೈಂ ತಂಡ ಸ್ಥಳಕ್ಕಾಗಮಿಸಿ ತನಿಖೆ ಕೈಗೆತ್ತಿಕೊಂಡಿದ್ದು, ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ಕೆಲವೊಂದು ಪುರಾವೆಗಳನ್ನು ದಾಖಲಿಸಿಕೊಂಡಿದ್ದಾರೆ.