




ಪೆರುವಾಯಿ ಜಂಕ್ಷನ್ನಿಂದ ಸುಮಾರು 500 ಮೀಟರ್ ದೂರದಲ್ಲಿರುವ ಪೇರಡ್ಕ ಬಳಿಯ ಕರ್ನಾಟಕ–ಕೇರಳ ಸಂಪರ್ಕ ಸೇತುವೆ ಹಾಗೂ ಪೆರುವಾಯಿ ಜಂಕ್ಷನ್ನಿಂದ ಸುಮಾರು 150 ಮೀಟರ್ ದೂರದಲ್ಲಿರುವ ಮಾಣಿಲ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಗಳು ತುಂಬಾ ಕಿರಿದಾಗಿದ್ದು ತೀರಾ ಹಳೆಯದಾಗಿದೆ.ನೂತನ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ದಿನಾಂಕ ಜೂನ್ 15 ಸೋಮವಾರದಂದು ಪೆರುವಾಯಿ ಗ್ರಾಮ ಪಂಚಾಯತ್ ಹಾಗೂ ಬಂಟ್ವಾಳ ತಾಲೂಕು ಪಂಚಾಯತ್ಗೆ ಮನವಿ ಸಲ್ಲಿಸಲಾಗಿದೆ.

ಪೆರುವಾಯಿ ಗ್ರಾಮದ ಪೇರಡ್ಕ ಬಳಿಯ ಕರ್ನಾಟಕ–ಕೇರಳ ಸಂಪರ್ಕ ಸೇತುವೆ ಅತ್ಯಂತ ಕಿರಿದಾಗಿದ್ದು ಅಪಾಯಕಾರಿಯಾದ ಸ್ಥಿತಿಯಲ್ಲಿದೆ, ಕಳೆದ ಕೆಲವು ವರ್ಷಗಳಲ್ಲಿ ಈ ಸೇತುವೆಯಲ್ಲಿ ಅನೇಕ ಅಪಘಾತಗಳು ಸಂಭವಿಸಿದ್ದು, ಇತ್ತೀಚಿಗೆ ಕೂಡಾ ವಾಹನಗಳು ಸೇತುವೆಯಿಂದ ಕೆಳಗೆ ಬಿದ್ದಿರುವ ಘಟನೆಗಳು ನಡೆದಿವೆ ಸಾರ್ವಜನಿಕರ ಜೀವ ಹಾಗೂ ಆಸ್ತಿ-ಪಾಸ್ತಿಗೆ ಗಂಭೀರ ಅಪಾಯ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ತುರ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಹಾಗೂ ನೂತನ ಸೇತುವೆ ನಿರ್ಮಿಸುವುದು ಅತ್ಯಗತ್ಯವಾಗಿದೆ.
ಒಂದು ವೇಳೆ ಜೂನ್ 20 ಶನಿವಾರದೊಳಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ, ಜೂನ್ 22 ಸೋಮವಾರದಂದು ಸಾರ್ವಜನಿಕರ ಸಹಭಾಗಿತ್ವದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸಲಾಗಿದೆ.ಈ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಅಗತ್ಯ ಅನುಮತಿ ಕೋರಿ ವಿಟ್ಲ ಪೊಲೀಸ್ ಠಾಣೆಗೂ ಅರ್ಜಿ ಸಲ್ಲಿಸಲಾಗಿದೆ.

ಜೂನ್ 16 ಮಂಗಳವಾರದಂದು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಬಂಟ್ವಾಳ ಹಾಗೂ ಲೋಕೋಪಯೋಗಿ ಇಲಾಖೆ, ಬಂಟ್ವಾಳ ಇವರಿಗೂ ಮನವಿ ಸಲ್ಲಿಸಲಾಗಿದೆ.ಅಪಾಯಕಾರಿಯಾದ ಹಳೆಯ ಸೇತುವೆಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ತಕ್ಷಣ ಕೈಗೊಳ್ಳುವುದು ಹಾಗೂ ನೂತನ ಸೇತುವೆ ನಿರ್ಮಾಣ ಪ್ರಕ್ರಿಯೆಯನ್ನು ಶೀಘ್ರವಾಗಿ ಆರಂಭಿಸುವಂತೆ ಆಗ್ರಹಿಸಲಾಗಿದೆ.









