ಬೆಂಗಳೂರು: ಪೊಗರು ಚಿತ್ರತಂಡ ಕ್ಷಮೆ ಕೇಳಿದರೆ ಸಾಲುವುದಿಲ್ಲ. ಬ್ರಾಹ್ಮಣರಿಗೆ ಅಪಮಾನದ ದೃಶ್ಯಗಳನ್ನು ತೆಗೆಯಲೇಬೇಕು ಎಂದು ಬ್ರಾಹ್ಮಣ ಸಮುದಾಯವರು ಆಗ್ರಹಿಸಿದ್ದಾರೆ.
ಪೊಗರು ಚಿತ್ರದಲ್ಲಿ ಬ್ರಾಹ್ಮಣರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಬ್ರಾಹ್ಮಣ ಸಮುದಾಯದವರು ಇಂದು ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟಿಸಿದರು. ಈ ವೇಳೆ ನಿರ್ದೇಶಕ ನಂದಕಿಶೋರ್ ಕ್ಷಮೆ ಕೇಳಿದರೆ ಸಾಲುವುದಿಲ್ಲ. ಅವಮಾನ ಮಾಡಿದ ದೃಶ್ಯಗಳನ್ನು ನಾಳೆ ಒಳಗಡೆ ತೆಗೆಯಬೇಕು ಎಂದು ಗಡುವು ನೀಡಿದ್ದಾರೆ.
ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ಹಾಗೂ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪೊಗರು ಸಿನಿಮಾದ ವಿರುದ್ಧ ದೂರು ನೀಡಿ ದೃಶ್ಯಕ್ಕೆ ಕತ್ತರಿ ಹಾಕಬೇಕೆಂದು ಆಗ್ರಹಿಸಿದೆ.
ಪೊಗರು ಸಿನಿಮಾದ ವಿರುದ್ಧ ಇಂದು ರಾಜ್ಯದ ಹಲವೆಡೆ ಪ್ರತಿಭಟನೆ ನಡೆದಿದೆ. ಮೈಸೂರು, ಕಲಬುರಗಿಯಲ್ಲಿ ಪ್ರತಿಭಟನೆ ನಡೆದಿದ್ದು, ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿ ಆಕ್ಷೇಪಾರ್ಹ ದೃಶ್ಯ ತೆಗೆಯಲು ಒತ್ತಾಯ ಮಾಡಿದ್ದಾರೆ.
ಪೊಗರು ನಿರ್ಮಾಪಕ ಬಿ.ಕೆ ಗಂಗಾಧರ್ ಪರ ನಿರ್ಮಾಪಕ ಸೂರಪ್ಪ ಬಾಬು ಮಾತನಾಡಿ, ಪೊಗರು ಸಿನಿಮಾ ಸೆನ್ಸಾರ್ ಆಗಿದೆ. ಈ ವಿಚಾರವನ್ನು ಕಾನೂನಾತ್ಮಕವಾಗಿ ಬಗೆಹರಿಸಬೇಕು. ಒಮ್ಮೆ ಸೆನ್ಸಾರ್ ಆದಮೇಲೆ ಅದನ್ನು ಮತ್ತೆ ಸೆನ್ಸಾರ್ ಮಂಡಳಿ ಮೂಲಕವೇ ಬಗೆಹರಿಸಬೇಕು. ನಾವು ಈಗಾಗಲೇ ಸೆನ್ಸಾರ್ ಮಂಡಳಿಗೆ ಮನವಿ ಮಾಡಿದ್ದೇವೆ. ಆಕ್ಷೇಪಾರ್ಹ ದೃಶ್ಯಗಳನ್ನ ತೆಗೆಯಲು 48 ಗಂಟೆಗಳ ಕಾಲ ಅವಕಾಶ ಬೇಕು ಎಂದು ಹೇಳಿದರು.