-ರಶೀದ್ ವಿಟ್ಲ
ವಿಟ್ಲದ ಜನತೆಗೆ ‘ಪೊಲೀಸ್ ಮೋನಿಚ್ಚ’ ಎಂದೇ ಚಿರಪರಿಚಿತರಾಗಿರುವ ಬಂದರು ಟ್ರಾಫಿಕ್ ಪೊಲೀಸ್ ಠಾಣೆಯ ನಿವೃತ್ತ ಪೊಲೀಸ್ ಸಬ್ ಇನ್ಸ್’ಪೆಕ್ಟರ್ ಹಾಜಿ ವಿ. ಮಹಮ್ಮದ್ ವಿಟ್ಲ ಅವರು ತಮ್ಮ 79ನೇ ವಯಸ್ಸಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಇಂದು (10/09/2020) ರಾತ್ರಿ 10.35ಕ್ಕೆ ಆಸ್ಪತ್ರೆಯಿಂದ ಮನೆಗೆ ತರುವ ಹಾದಿಯಲ್ಲಿ ಆಂಬುಲೆನ್ಸ್ ನಲ್ಲಿ ಇಹಲೋಕ ತ್ಯಜಿಸಿದರು. ಶುಕ್ರವಾರ ಜುಮಾ ಮೊದಲು ಬಜ್ಪೆಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ಮೂಲತಃ ವಿಟ್ಲ ಸಮೀಪದ ಮಾರ್ನೆಮಿಗುಡ್ಡೆ ನಿವಾಸಿಯಾಗಿದ್ದ ವಿ. ಮಹಮ್ಮದ್ ಹಾಜಿ ಕಳೆದ 27 ವರ್ಷಗಳಿಂದ ಬಜ್ಪೆಯಲ್ಲಿ ನೆಲೆಸಿದ್ದಾರೆ. ಸ್ನೇಹಜೀವಿಯಾಗಿದ್ದ ಮಹಮ್ಮದ್ ಹಾಜಿ ಅವರು ಸಂಘಟನಾತ್ಮಕವಾಗಿ ಧಾರ್ಮಿಕ ವಿಚಾರಗಳಲ್ಲಿ ತೊಡಗಿಸಿಕೊಂಡಿದ್ದರು. ಮಂಗಳೂರು ಪೊಲೀಸ್ ಲೈನ್ ಬಳಿಯಿರುವ ಸೈದಾನ್ ಬೀವಿ ದರ್ಗಾದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಮೂಳೂರು ಮರ್ಕಝುಲ್ ತಹ್ಲೀಮುಲ್ ಇಹ್ಸಾನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದರು.
ಬಜ್ಪೆ ಕೇಂದ್ರ ಜುಮಾ ಮಸೀದಿಯಲ್ಲಿ ಹಲವು ವರ್ಷ ಅಧ್ಯಕ್ಷರಾಗಿದ್ದರು. ವಿಟ್ಲ ಜುಮಾ ಮಸೀದಿಯಲ್ಲಿ ಈ ಹಿಂದೆ ಗೌರವಾಧ್ಯಕ್ಷರಾಗಿದ್ದರು. ಮಂಗಳೂರು ಹಜ್ ನಿರ್ವಹಣಾ ಸಮಿತಿಯಲ್ಲೂ ಸದಸ್ಯರಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಹೆಚ್ಚಾಗಿ ಸೂಟ್ ಡ್ರೆಸ್ ಧರಿಸುತ್ತಿದ್ದ ಮಹಮ್ಮದ್ ಹಾಜಿ ಸದಾ ನಗುಮುಖದ ವ್ಯಕ್ತಿತ್ವ. ಜೊತೆಗೆ ಗಾಂಭೀರ್ಯವೂ ಇತ್ತು. ಹಜ್ ನಿರ್ವಹಣಾ ಸಮಿತಿಯಲ್ಲಿ ನಾವು ಜೊತೆಯಾಗಿ ಕೆಲಸ ಮಾಡುತ್ತಿದ್ದೆವು. ನಮ್ಮನ್ನು ಹುರಿದುಂಬಿಸುತ್ತಿದ್ದರು. ‘ನನಗೆ ವಯಸ್ಸಾಯಿತು. ನಿನ್ನಂತಹವರು ಮುಂದೆ ಬರಬೇಕೆಂದು’ ಹೇಳಿ ಬೆನ್ನು ತಟ್ಟುತ್ತಿದ್ದರು. ಅವರ ಅಗಲುವಿಕೆ ನೋವು ತಂದಿದೆ. ಅಲ್ಲಾಹನು ಅವರ ಖಬರನ್ನು ಪ್ರಕಾಶಿಸಲಿ. ಕುಟುಂಬಿಕರಿಗೆ ನೋವು ಸಹಿಸುವ ಶಕ್ತಿ ನೀಡಲಿ.
-ರಶೀದ್ ವಿಟ್ಲ.