

ಬಸವೇಶ್ವರನಗರ ಠಾಣೆ ಮುಂದೆ ಬುಧವಾರ ಅಕ್ರಮವಾಗಿ ಗುಂಪು ಸೇರಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ ಆರೋಪದ ಮೇರೆಗೆ ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಹರೀಶ್ ಪೂಂಜಾ ಸೇರಿ ಹಲವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಹಿಂದೂಪರ ಸಂಘಟನೆ ಕಾರ್ಯಕರ್ತ ಎಂದು ಘೋಷಿಸಿಕೊಂಡಿರುವ ಪುನೀತ್ ಕೆರೆಹಳ್ಳಿ ಮೇಲೆ ವಿಜಯನಗರ ಉಪವಿಭಾಗದ ಎಸಿಪಿ ಚಂದನ್ ಕುಮಾರ್ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಮೇರೆಗೆ ದೂರು ಸಲ್ಲಿಸಲು ಠಾಣೆ ಮುಂದೆ ಮಾಜಿ ಸಂಸದರ ನೇತೃತ್ವದಲ್ಲಿ ಪ್ರತಿಭಟನೆಗೆ ನೂರಾರು ಮಂದಿ ಸೇರಿದ್ದರು. ಬಸವೇಶ್ವರ ನಗರ ಠಾಣೆ ಮುಂದೆ ಪುನೀತ್ ಕೆರೆಹಳ್ಳಿ, ಶಾಸಕ ಹರೀಶ್ ಪೂಂಜಾ ಸೇರಿದಂತೆ ಹಲವು ಮಂದಿ ಹೈಡ್ರಾಮಾ ಸೃಷ್ಟಿಸಿದ್ದರು. ಪೊಲೀಸ್ ಕಸ್ಟಡಿಯಲ್ಲಿದ್ದಾಗ ಹಲ್ಲೆ ನಡೆಸಿ, ಅವಾಚ್ಯವಾಗಿ ನಿಂದಿಸಲಾಗಿದೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.
ಎಸಿಪಿ ಚಂದನ್ ವಿರುದ್ಧ ಆರೋಪಗಳ ಸುರಿಮಳೆ ಜತೆಗೆ ಕೂಗಾಟ ಹೆಚ್ಚಾಗಿ ಠಾಣೆ ಮುಂದೆ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಬೆನ್ನಲ್ಲೇ ಅಲರ್ಟ್ ಆದ ಪೊಲೀಸರು ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಪೂಂಜಾ, ಪುನೀತ್ ಸೇರಿ ಹಲವರನ್ನು ವಶಕ್ಕೆ ಪಡೆದರು. ಪ್ರತಾಪ್ ಸಿಂಹ ಅವರನ್ನು ಪೊಲೀಸರು ಠಾಣೆಗೆ ಎಳೆದೊಯ್ದರು.
ಪುನೀತ್ ಕೆರೆಹಳ್ಳಿ, ಪ್ರತಾಪ್ ಸಿಂಹ, ಹರೀಶ್ ಪೂಂಜ ಹಾಗೂ ಇತರರ ವಿರುದ್ಧ ಬಿಎನ್ಎಸ್ 126(2), 189(2), 191(2) 190BNS, ಮತ್ತು 103 ಕರ್ನಾಟಕ ಪೊಲೀಸ್ ಆ್ಯಕ್ಟ್ ಅಡಿ ಬೆಂಗಳೂರು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
A1ಪುನೀತ್ ಕೆರೆಹಳ್ಳಿ, A2ಪ್ರತಾಪ್ ಸಿಂಹ, A3 ಹರೀಶ್ ಪೂಂಜ ಸೇರಿ ಇತರರ ವಿರುದ್ಧ ಬೆಂಗಳೂರು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.