ಮಂಗಳೂರು: ಸರಕಾರಕ್ಕೆ ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿ ಕಾಡಿದ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿಗಳ ಬಂಧನ ಇನ್ನೂ ಆಗಿಲ್ಲ. ಪ್ರವೀಣ್ ಹತ್ಯೆ ನಡೆದು 100 ದಿನವಾದರೂ ಪ್ರಕರಣದ ನಾಲ್ಕು ಪ್ರಮುಖ ಆರೋಪಿಗಳ ಬಂಧನ ಬಾಕಿಯಿದ್ದು ಅವರಿಗಾಗಿ ಎನ್ ಐ ಎ ಶೋಧ ಕಾರ್ಯ ನಡೆಸುತ್ತಿರುವ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ. ಈ ನಾಲ್ವರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಇವರ ಪೈಕಿ ಮೂವರು ದಕ್ಷಿಣ ಕನ್ನಡ ಹಾಗೂ ಓರ್ವ ಕೊಡಗು ಮೂಲದವರಾಗಿದ್ದಾರೆ.
ಇನ್ನು ಪ್ರಮುಖ ಆರೋಪಿಗಳ ಅಡಗುತಾಣದ ಸ್ಪಷ್ಟ ಮಾಹಿತಿ ದೊರಕದ ಹಿನ್ನಲೆಯಲ್ಲಿ ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳ ಮಾಹಿತಿ ನೀಡಿದವರಿಗೆ ಎನ್ಐಎ ಲಕ್ಷ ಲಕ್ಷ ಬಹುಮಾನ ನೀಡೋದಾಗಿ ಪ್ರಕಟಣೆ ಹೊರಡಿಸಿದೆ. ನಾಲ್ಕು ಜನರ ಮಾಹಿತಿ ನೀಡಿದವರಿಗೆ ಒಟ್ಟು 14 ಲಕ್ಷ ಬಹುಮಾನ ದೊರಕಲಿದೆ. ತಲೆಮರೆಸಿಕೊಂಡ ಆರೋಪಿಗಳಾದ ಮಹಮ್ಮದ್ ಮುಸ್ತಾಫ ಬೆಳ್ಳಾರೆ, ತುಫೈಲ್ ಮಡಿಕೇರಿ ಅವರ ಬಗ್ಗೆ ಮಾಹಿತಿ ನೀಡಿದವರಿಗೆ ತಲಾ 5 ಲಕ್ಷ ನೀಡುವುದಾಗಿ ಘೋಷಿಸಲಾಗಿದೆ. ಅದಲ್ಲದೆ, ಇನ್ನು ಉಮ್ಮರ್ ಫಾರೂಕ್ ಸುಳ್ಯ, ಅಬೂಬಕ್ಕರ್ ಸಿದ್ದೀಕ್ ಬೆಳ್ಳಾರೆ ಬಗ್ಗೆ ಮಾಹಿತಿ ನೀಡಿದವರಿಗೆ ತಲಾ 2 ಲಕ್ಷ ಬಹುಮಾನ ನೀಡುವುದಾಗಿ ಎನ್.ಐ.ಎ.ಘೋಷಿಸಿದೆ.
ಆರೋಪಿಗಳು.!!!
ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಪೈಚಾರು ನಿವಾಸಿ ಮಹಮ್ಮದ್ ಮುಸ್ತಾಫ, ಸುಳ್ಯ ನಗರದ ಕಲ್ಲು ಮಟ್ಟೆಮನೆ ನಿವಾಸಿ, ಉಮ್ಮರ್ ಫಾರೂಕ್, ಬೆಳ್ಳಾರೆ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಹಾಗೂ ಕೊಡಗು ಜಿಲ್ಲೆಯ ಮಡಿಕೇರಿ ನಿವಾಸಿ ತುಫೈಲ್ ತಲೆ ಮರೆಸಿಕೊಂಡಿರುವ ಆರೋಪಿಗಳು. ನಾಲ್ವರು ಪಿಎಫ್ಐ ಇದರ ಸಕ್ರಿಯ ಸದಸ್ಯರು ಎಂದು ಎನ್ಐಎ ಪ್ರಕಟನೆಯಲ್ಲಿ ತಿಳಿಸಲಾಗಿದೆ. ಆರೋಪಿಗಳ ಬಂಧಿಸಲು ನೆರವಾಗುವವರಿಗೆ ಈ ಬಹುಮಾನ ಘೋಷಿಸಲಾಗಿದ್ದು, ಮಾಹಿತಿ ನೀಡಿದವರ ಗುರುತನ್ನು ಗೌಪ್ಯವಾಗಿ ಇಡಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಯಾರು ಈ ನಾಲ್ವರು ಆರೋಪಿಗಳು.!! ಘಟನೆ ಹಿನ್ನಲೆ.??
ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಅಕ್ಷಯ್ ಹೆಸರಿನ ಕೋಳಿ ಮಾಂಸದ ಅಂಗಡಿ ಹೊಂದಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ 31 ವರ್ಷದ ಪ್ರವೀಣ್ ನೆಟ್ಟಾರು ಅವರನ್ನು ಜುಲೈ 26 ರಂದು ರಾತ್ರಿ 8 ಗಂಟೆ ಸುಮಾರಿಗೆ ಅಂಗಡಿ ಮುಚ್ಚಿ ಮನೆ ಕಡೆ ಹೊರಟಿದ್ದರು. ಈ ವೇಳೆ ಬೈಕಿನಲ್ಲಿ ಬಂದಿದ್ದ ಮೂವರು ತಲ್ವಾರ್ನಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ತಕ್ಷಣವೇ ಪುತ್ತೂರು ಆಸ್ಪತ್ರೆಗೆ ದಾಖಲಿಸಿದರೂ ತೀವ್ರ ಏಟು ಬಿದ್ದಿದ್ದ ಕಾರಣ ಪ್ರವೀಣ್ ಮೃತಪಟ್ಟಿದ್ದರು.
ಯಾವ ರೀತಿ ಸ್ಕೆಚ್ ಹಾಕಿದ್ರು..? ಒಬ್ಬೊಬ್ಬರ ಕಾರ್ಯವೈಖರಿ ಹೇಗಿತ್ತು ಗೊತ್ತಾ..? ಮಹಮ್ಮದ್ ಮುಸ್ತಾಫನಿಂದಲೇ ಹತ್ಯೆಗೆ ಮಾಸ್ಟರ್ ಪ್ಲಾನ್
ಈ ಘಟನೆಯಲ್ಲಿ ಬೆಳ್ಳಾರೆ ಗ್ರಾಮದ ಪೈಚಾರು ನಿವಾಸಿ ಮಹಮ್ಮದ್ ಮುಸ್ತಾಫ ಎನ್ನುವಾತ ಪ್ರಮುಖ ರೂವಾರಿಯಾಗಿದ್ದು, ಹತ್ಯೆಗೆ ಸ್ಕೆಚ್ ರೂಪಿಸಿದ ಟಾಪ್ 1 ಆರೋಪಿ. ಈತನೇ ಇದೆಲ್ಲದರ ರೂವಾರಿ ಎನ್ನಲಾಗುತ್ತಿದೆ.
ಉಮ್ಮರ್ ಫಾರುಕ್ ಹತ್ಯೆಗೆ ಸ್ಕೆಚ್ ಹಾಕಿದವರ ಜೊತೆ ಕೈಜೋಡಿಸಿದ್ದಾನೆ. ಈತನೇ ಬೈಕ್ ಕೊಟ್ಟಿದ್ದಾನೆ ಎಂಬ ಮಾಹಿತಿಯೂ ಇದೆ.
ಅಬೂಬಕ್ಕರ್ ಸಿದ್ದಿಕ್ ಎಂಬಾತ ಪ್ರವೀಣ್ ನೆಟ್ಟಾರು ಅವರ ಚಲನವಲನಗಳನ್ನು ಗಮನಿಸಿ ಹತ್ಯೆಗೆ ಸಂಚು ರೂಪಿಸಿದ್ದಾನೆ. ಅಬೂಬಕ್ಕರ್ ಸಿದ್ದಿಕ್ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಇರುವ ಪ್ರವೀಣ್ ನೆಟ್ಟಾರು ಅವರ ಕೋಳಿ ಮಾಂಸದ ಅಂಗಡಿ ಬಳಿ ಸುಮಾರು ದಿವಸಗಳಿಂದ ಎಲ್ಲಾ ರೀತಿಯ ಚಲನವಲನಗಳನ್ನು ಗಮನಿಸಿ ಹತ್ಯೆಗೆ ಸಂಚು ರೂಪಿಸುವಲ್ಲಿ ದೊಡ್ಡ ಮಟ್ಟದ ಸಹಾಯ ಮಾಡಿದ್ದಾನೆ.
ಇನ್ನು ಮಡಿಕೇರಿ ನಿವಾಸಿ ತುಫೈಲ್ ಎಂಬಾತ ಆರೋಪಿಗಳಿಗೆ ಆಶ್ರಯ ನೀಡಿ ಆರೋಪಿಗಳ ಸುಳಿವು ಸಿಗದಂತೆ ನೋಡಿಕೊಂಡಿದ್ದಾನೆ. ಈ ರೀತಿಯಾಗಿ ಹತ್ಯೆ ನಡೆಸಿದ ದುಷ್ಕರ್ಮಿಗಳು ಸುಳಿವು ಸಿಗದಂತೆ ತಲೆಮರೆಸಿಕೊಂಡಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆಯಿಂದ ದಕ್ಷಿಣ ಕನ್ನಡದಲ್ಲೂ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲೂ ಪ್ರತಿಭಟನೆ ನಡೆದಿತ್ತು. ತನಿಖೆಯಲ್ಲಿ ಸರ್ಕಾರ ವಿಫಲವಾಗಿದ್ದು, ಕಾರ್ಯಕರ್ತರ ಹಿತ ಕಾಯಲು ಪಕ್ಷ ವಿಫಲವಾಗಿದೆ ಎಂದು ಆರೋಪಿಸಿ ಹಲವಾರು ಬಿಜೆಪಿ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದರು. ಇದರಿಂದಾಗಿ ಪಕ್ಷ ಹಾಗೂ ಸರ್ಕಾರವು ಮುಜುಗರ ಅನುಭವಿಸಬೇಕಾದ ಪರಿಸ್ಥಿತಿಯೂ ಉಂಟಾಗಿತ್ತು. ಳಿಕ ರಾಜ್ಯ ಸರ್ಕಾರ ಎನ್ಐಎ ಹೆಗಲಿಗೆ ತನಿಖೆ ಜವಾಬ್ದಾರಿಯನ್ನು ವಹಿಸಿತ್ತು.
ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದ ಎನ್ಐಎ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮತ್ತು ಸುಳ್ಯದ ೩೨ ಕಡೆಗಳಲ್ಲಿ ದಾಳಿ ನಡೆಸಿತ್ತು. ಕೇರಳದ ೭ ಕಡೆ ಆಶ್ರಯ, ಹಂತಕರು ಸೇರಿದಂತೆ ೧೦ಕ್ಕೂ ಹೆಚ್ಚು ಮಂದಿಯನ್ನು ಎನ್ಐಎ ಬಂಧಿಸಿದೆ. ಆದರೇ ಆರೋಪಿಗಳು ಹತ್ಯೆಗೆ ಬಳಸಿದ ಹತ್ಯಾರು ಸಿಕ್ಕಿದ್ದೆಯೇ.? ಎನ್ನುವುದು ಗುಟ್ಟಾಗಿ ಉಳಿದಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಇವರೆಗೆ ಯಾವುದೇ ಮಾಹಿತಿ ಹಂಚಿಕೊ0ಡಿರುವುದು ತಿಳಿದು ಬಂದಿಲ್ಲ ಇದೀಗ ಕೊಲೆ ಮಾಡಿರುವ ಪ್ರಮುಖ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದು, ಆರೋಪಿಗಳ ಪತ್ತೆಗೆ ಮಾಹಿತಿ ನೀಡಿದವರೆ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ.