ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಸೋಮನಾಥ್ನಲ್ಲಿ ವಿವಿಧ ಯೋಜನೆಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಶಂಕು ಸ್ಥಾಪನೆ ಮಾಡಿದರು. ಸೋಮನಾಥ ವಾಯುವಿಹಾರ, ಸೋಮನಾಥ ವಸ್ತು ಪ್ರದರ್ಶನ ಕೇಂದ್ರ, ಪಾರ್ವತಿ ದೇವಸ್ಥಾನ ಮತ್ತು ಹಳೆಯ (ಜುನ) ಸೋಮನಾಥ ದೇವಾಲಯದ ಜೀರ್ಣೋದ್ದಾರ ಸಂಬಂಧಿಸಿದಂತೆ ಹಲವು ಯೋಜನೆಗಳಿಗೆ ಚಾಲನೆ ನೀಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ.. ಈ ಪವಿತ್ರ ಸ್ಥಳದ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಇಂದು ಮತ್ತೊಮ್ಮೆ ನಾವೆಲ್ಲರೂ ಈ ಪವಿತ್ರ ಸ್ಥಳ ನವ ಯೌವನ ಪಡೆಯುವುದನ್ನು ನೋಡುತ್ತಿದ್ದೇವೆ. ನಾವು ಧಾರ್ಮಿಕ ಪ್ರವಾಸೋದ್ಯಮವನ್ನು ಬಲಪಡಿಸಬೇಕಿದೆ. ಇದು ಯುವಕರಿಗೆ ಹೆಚ್ಚು ಉದ್ಯೋಗವನ್ನೂ ಒದಗಿಸುತ್ತದೆ. ಅದರಿಂದ ನಮ್ಮ ಪೂರ್ವಜರ ಬಗ್ಗೆ ಯುವಕರಿಗೆ ಮಾಹಿತಿ ಸಿಗಲಿದೆ.
ವಿಶ್ವನಾಥನಿಂದ ಸೋಮನಾಥದವರೆಗೆ ಅನೇಕ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಿದ ಲೋಕಮಾತಾ ಅಹಲ್ಯಾಬಾಯಿ ಹೋಳ್ಕರ್ ಅವರಿಗೆ ಈ ಸಂದರ್ಭದಲ್ಲಿ ನಾನು ನಮಸ್ಕರಿಸುತ್ತೇನೆ ಎಂದರು. ಅಲ್ಲದೇ ಇಂದಿಗೂ ಧಾರ್ಮಿಕ ಭಯೋತ್ಪಾದನೆ ಕಂಡು ಬರ್ತಿದೆ. ಸೋಮ್ನಾಥ್ ಮೇಲೆ ಅದೆಷ್ಟು ಬಾರಿ ದಾಳಿ ನಡೆಯಿತು. ಪ್ರತಿಬಾರಿ ಸೋಮನಾಥ್ ದೇವಾಲಯ ಮತ್ತೆ ಕಟ್ಟಲ್ಪಟ್ಟಿದೆ ಎಂದೂ ಮೋದಿ ಇತಿಹಾಸ ನೆನಪಿಸಿಕೊಂಡರು.
ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ, ಜಿ.ಕೃಷ್ಣಾ ರೆಡ್ಡಿ, ಗುಜರಾತ್ ಸಿಎಂ ವಿಜಯ್ ರೂಪಾನಿ, ಉಪಮುಖ್ಯಮಂತ್ರಿ ನಿತಿನ್ ಪಾಟೇಲ್ ಸೇರಿದಂತೆ ಗಣ್ಯರು ಭಾಗಿಯಾಗಿದ್ದರು.