ನವದೆಹಲಿ: ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾದ ಡಿಜಿಟಲ್ ಇಂಡಿಯಾ ಮಿಷನ್ನಿಂದ ಒನ್ ನೇಶನ್, ಒನ್ ರೇಶನ್ ಕಾರ್ಡ್ನಂತಹ ಸ್ಕೀಮ್ಗಳನ್ನು ಹೊರತರಲು ಸಹಾಯವಾಗುತ್ತಿದೆ. ಕೊವಿಡ್ 19 ಸಂಕಷ್ಟದ ಸಂದರ್ಭದಲ್ಲಿ ಲಕ್ಷಾಂತರ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಇದು ಸಹಕಾರಿಯಾಯಿತು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ಡಿಜಿಟಲ್ ಇಂಡಿಯಾ ಮಿಷನ್ ಆರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಅದರ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಇವತ್ತು ಡಿಜಿಟಲ್ ಇಂಡಿಯಾದಿಂದಾಗಿ ಕೋಟ್ಯಂತರ ಜನರಿಗೆ ಹಣ ವರ್ಗಾವಣೆ ಮಾಡಲು ಸುಲಭವಾಗಿದೆ. ದೇಶದಲ್ಲಿ ಒಂದು ದಿನಕ್ಕೆ ಯುಪಿಐ ಮೂಲಕ ಏನಿಲ್ಲವೆಂದರೂ 5 ಲಕ್ಷ ರೂಪಾಯಿ ಹಣ ವರ್ಗಾವಣೆ ಆಗುತ್ತದೆ ಎಂದು ಹೇಳಿದರು.
ಡಿಜಿಟಲ್ ಇಂಡಿಯಾ ಮಿಷನ್ನ ಪ್ರಮುಖ ಯೋಜನೆಯಾದ ಒನ್ ನೇಶನ್, ಒನ್ ರೇಶನ್ ವ್ಯವಸ್ಥೆಯಿಂದ ವಲಸಿಗರಿಗೆ ತುಂಬ ಸಹಾಯವಾಗುತ್ತದೆ ಎಂದು ಹೇಳಿದ ಮೋದಿಯವರು, ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತಕ್ಕೆ ಡಿಜಿಟಲ್ ಮೀಡಿಯಾ ಅತ್ಯುತ್ತಮ ಉದಾಹರಣೆಯಾಗಿದ್ದು, ಜನರ ಕೈಯನ್ನು ಇದು ಬಲಪಡಿಸಿದೆ. ಈ ಯೋಜನೆಯಡಿಯಲ್ಲೇ ಕೊವಿಡ್ 19 ಟ್ರೇಸಿಂಗ್ ಆ್ಯಪ್ ಆದ ಆರೋಗ್ಯ ಸೇತು ಆ್ಯಪ್ ಅಭಿವೃದ್ಧಿಪಡಿಸಲಾಯಿತು ಎಂದು ತಿಳಿಸಿದರು.
ನಮ್ಮಲ್ಲಿ ಕೊವಿಡ್ 19 ಲಸಿಕೆ ನೋಂದಣಿಗಾಗಿ ಅಭಿವೃದ್ಧಿಪಡಿಸಲಾದ ಕೊವಿನ್ ಆ್ಯಪ್ ಜಗತ್ತಿನ ಹಲವು ದೇಶಗಳ ಗಮನ ಸೆಳೆದಿದೆ. ತಮ್ಮಲ್ಲೂ ಈ ವ್ಯವಸ್ಥೆ ಅಳವಡಿಸಿಕೊಳ್ಳಲು ಅವರು ಮುಂದಾಗಿದ್ದಾರೆ ಎಂದು ಹೇಳಿದರು.
ಭಾರತದಲ್ಲಿ ಸೈಬರ್ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನಹರಿಸಲಾಗಿದೆ. ಇತ್ತೀಚೆಗೆ ವಿಶ್ವಸಂಸ್ಥೆಯ ಇಂಟರ್ನ್ಯಾಷನಲ್ ಟೆಲಿಕಮ್ಯೂನಿಕೇಶನ್ ಯೂನಿಯನ್, ಸೈಬರ್ ಸುರಕ್ಷತೆಯಲ್ಲಿ ಮುಂದುವರಿದಿರುವ ವಿಶ್ವದ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಭಾರತ 10ನೇ ಸ್ಥಾನದಲ್ಲಿದೆ ಎಂದು ನರೇಂದ್ರ ಮೋದಿ ತಿಳಿಸಿದರು.
ಅಲ್ಲದೆ ಇಂದು ಕೋಟ್ಯಂತರ ಜನರು ಡಿಜಿಟಲ್ ವ್ಯವಸ್ಥೆಯ ಅನುಕೂಲ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಶಿಕ್ಷಣ ಪಡೆಯುವಂತಾಗಿದೆ. ವೈದ್ಯಕೀಯ ಔಷಧಗಳನ್ನೂ ಆನ್ಲೈನ್ನಲ್ಲೇ ಒದಗಿಸುವಷ್ಟು ಮುಂದುವರಿದಿದ್ದೇವೆ. ಇದಕ್ಕಿಂತ ಸಂತೋಷ ಇನ್ನೇನು ಬೇಕು ಎಂದು ಹೇಳಿದರು.
ಸದ್ಯ ಒನ್ ನೇಶನ್ ಒನ್ ರೇಶನ್ ದೇಶದಲ್ಲಿ ಇನ್ನೂ ಸಂಪೂರ್ಣವಾಗಿ ಜಾರಿಯಾಗಿಲ್ಲ. ಆದರೆ ಜುಲೈ 31ರೊಳಗೆ ಎಲ್ಲ ರಾಜ್ಯ ಸರ್ಕಾರಗಳೂ ಈ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಆ ಮೂಲಕ ಅಸಂಘಟಿತ ವಲಯಗಳ ವಲಸೆ ಕಾರ್ಮಿಕರ ಹಿತರಕ್ಷಣೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.