ಪುತ್ತೂರು: ದರ್ಬೆಯ ಪ್ರತಿಷ್ಟಿತ ಶಾಪಿಂಗ್ ಮಾಲ್ ಸಿಬ್ಬಂದಿಗಳಿಗೆ ಯುವಕನೋರ್ವ ತಲ್ವಾರ್ ತೋರಿಸಿ ಬೆದರಿಕೆ ಹಾಕಿರುವ ಘಟನೆ ಪುತ್ತೂರಿನ ಬಾರ್ ಒಂದರ ಮುಂಭಾಗ ನಡೆದಿದೆ. ತಲ್ವಾರ್ ಝಳಪಿಸಿದ ಯುವಕನನ್ನು ಪ್ರಜ್ವಲ್ ಎಂದು ಗುರುತಿಸಲಾಗಿದೆ.
ಶಾಪಿಂಗ್ ಮಾಲ್ನಲ್ಲಿ ಕಾರ್ಯ ನಿರ್ವಹಿಸುವ 8 ರಿಂದ 10 ಮಂದಿ ಸಿಬ್ಬಂದಿಗಳು ಜೂನ್ 9 ರಂದು ರಾತ್ರಿ ಕೆಲಸ ಮುಗಿಸಿ ಹೋಗುತ್ತಿದ್ದ ವೇಳೆ ಸಿಬ್ಬಂದಿ ಜೊತೆ ಫೋನ್ನಲ್ಲಿ ಆರೋಪಿ ಪ್ರಜ್ವಲ್ ಮಾತನಾಡುತ್ತಿದ್ದ. ನಂತರ ಮಾತಿಗೆ ಮಾತು ಬೆಳೆದು ಕ್ಷುಲ್ಲಕ ಕಾರಣಕ್ಕೆ ತಲ್ವಾರು ಹಿಡಿದುಕೊಂಡು ಸಿಬ್ಬಂದಿಗಳು ಇದ್ದ ಜಾಗಕ್ಕೆ ಬಂದು ಸಿಬ್ಬಂದಿಗಳನ್ನು ಅಟ್ಟಾಡಿಸಿ ಓಡಿಸಿದ್ದಾನೆ ಎನ್ನಲಾಗಿದೆ. ಇನ್ನು ತಲ್ವಾರ್ ಝಳಪಿಸಿದ ಯುವಕ ಗಾಂಜಾ ವ್ಯಸನಿ ಎಂದು ಇಲ್ಲಿನ ಸ್ಧಳೀಯರು ದೂರಿದ್ದಾರೆ.
ಈ ವೇಳೆ ಹೆದರಿದ ಸಿಬ್ಬಂದಿಯೋರ್ವ ಓಡುವ ಭರದಲ್ಲಿ ಬಿದ್ದು ಮೂರು ಹಲ್ಲು ಮುರಿದಿದೆ ಎನ್ನಲಾಗಿದೆ. ತಲ್ವಾರು ತೋರಿಸಿ ಬೆದರಿಕೆ ಹಾಕಿದ ಯುವಕನ ವಿರುದ್ಧ ಶಾಪಿಂಗ್ ಮಾಲ್ ಸಿಬ್ಬಂದಿಗಳು ದೂರು ನೀಡಲು ಮುಂದಾಗಿದ್ದಾರೆ. ಸ್ಧಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.