ಅಕ್ರಮ ಆಸ್ತಿ ಗಳಿಕೆಯ ಆರೋಪದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದ ತಹಸೀಲ್ದಾರ್ ಅಜಿತ್ ರೈ.ಗೆ ನ್ಯಾಯಾಲಯ ಮತ್ತೊಂದು ಶಾಕ್ ನೀಡಿದೆ. ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ವಜಾ ಆಗಿದ್ದು, ಲೋಕಾಯುಕ್ತ ಪೊಲೀಸರು ಆರೋಪಿ ಜಾಮೀನಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಕುಬೇರ ಮಾಡಿರೋ ಬೇನಾಮಿ ಆಸ್ತಿಯ ಸುತ್ತ ಈಗ ವಿವಿಧ ಇಲಾಖೆಗಳು ಸಹ ಕಣ್ಣಿರಿಸಿದೆ. ಲೋಕಾಯುಕ್ತದ ಬಲೆಗೆ ಬಿದ್ದಿರುವ ಭ್ರಷ್ಟ ಅಧಿಕಾರಿಗೆ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯ ತಂಡಗಳು ಕಗ್ಗಂಟಾಗಿ ಪರಿಣಮಿಸಿದೆ. ವಿವಿಧ ಆಯಾಮದಲ್ಲಿ ತನಿಖೆಗೆ ವಿವಿಧ ಇಲಾಖೆಗಳು ಮುಂದಾಗಿದೆ ಎಂಬ ಮಾಹಿತಿ ಕೇಳಿಬರುತ್ತಿದೆ.
500 ಕೋಟಿಗೂ ಹೆಚ್ಚು ಮೌಲ್ಯದ ಬೇನಾಮಿ ಆಸ್ತಿಗಳನ್ನು ಹೊಂದಿರುವ ಆರೋಪದಡಿ ಕೆ.ಆರ್.ಪುರ ತಾಲ್ಲೂಕಿನ ಹಿಂದಿನ ತಹಶೀಲ್ದಾರ್ ಅಜಿತ್ ಕುಮಾರ್ ರೈ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣವನ್ನಯ ತನಿಖೆ ನಡೆಸಿ ಅಜಿತ್ ರೈ ಅವರನ್ನು ಬಂಧಿಸಲಾಗಿತ್ತು.
ನಿನ್ನೆ ದೇವನಹಳ್ಳಿ ತಹಸೀಲ್ದಾರ್ ಕಚೇರಿಯಲ್ಲಿ ದಾಖಲೆ ಪರಿಶೀಲನೆ ಮಾಡಿದ್ದು, ದೇವನಹಳ್ಳಿಯಲ್ಲಿ ತಹಸೀಲ್ದಾರ್ ಮತ್ತು ರೈ ಗ್ರೇಡ್ 2 ತಹಸೀಲ್ದಾರ್ ಆಗಿದ್ದ. ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಇಬ್ಬರು ಲೋಕಾಯುಕ್ತ ಅಧಿಕಾರಿಗಳಿಂದ ದಾಖಲೆ ಪರಿಶೀಲನೆಯಾಗಿದ್ದು, ಲೋಕಾಯುಕ್ತ ಅಧಿಕಾರಿಗಳಿಗೆ ತಹಸೀಲ್ದಾರ್ ಶಿವರಾಜ್ ಸಾಥ್ ನೀಡಿದ್ದಾರೆ. ಈ ಮಧ್ಯೆ ಅಜಿತ್ ರೈ ಕೋರಿದ್ದ ಜಾಮೀನು ಅರ್ಜಿ ವಜಾ ಆಗಿದ್ದು, ಲೋಕಾಯುಕ್ತ ಪೊಲೀಸರು ಆರೋಪಿ ಜಾಮೀನಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಾಮೀನು ನೀಡಿದರೆ ತನಿಖೆಗೆ ಹಿನ್ನಡೆ ಎಂದು ವಾದ ಮಂಡನೆಯಾಗಿದ್ದು, 2 ಕಡೆ ವಾದ ಆಲಿಸಿ ನ್ಯಾ.ಎಸ್.ವಿ.ಶ್ರೀಕಾಂತ್ ಜಾಮೀನು ತಿರಸ್ಕರಿಸಿದ್ದಾರೆ. ಸದ್ಯ ಅಜಿತ್ ರೈ ನ್ಯಾಯಾಂಗ ಬಂಧನದಲ್ಲಿದ್ದಾನೆ.
ವಿವಿಧ ಆಯಾಮದಲ್ಲಿ ತನಿಖೆ
ಲೋಕಾಯುಕ್ತ ದಾಳಿಗೆ ಸಿಲುಕಿ ಅಮಾನತುಗೊಂಡಿರುವ ತಹಸೀಲ್ದಾರ್ ಅಜಿತ್ ರೈ ಪ್ರಕರಣವನ್ನು ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯ ತಂಡಗಳು ತನಿಖೆಗೊಳಪಡಿಸುವ ಸಾಧ್ಯತೆಯಿದೆ.
ಲೋಕಾಯುಕ್ತರು ಈಗಾಗಲೇ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ. ಉಳಿದಂತೆ ಅಕ್ರಮ ಹಣ ವರ್ಗಾವಣೆ, ಬೇನಾಮಿ ಆಸ್ತಿ ತೆರಿಗೆ ಮತ್ತು ಆದಾಯ ತೆರಿಗೆ ಕಾಯ್ದೆಗಳಡಿ ತನಿಖೆ ನಡೆಸಲು ಆಯಾ ಇಲಾಖೆಯ ಅಧಿಕಾರಿಗಳ ತಂಡ ಮುಂದಾಗಬೇಕಿದೆ.
ಈ ನಿಟ್ಟಿನಲ್ಲಿ ಲೋಕಯುಕ್ತ ಪೊಲೀಸರು ತಮ್ಮ ಇಲಾಖೆಗಳ ಅಕಾರಿಗಳಿಗೆ ಮಾಹಿತಿ ರವಾನೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಹಲವಾರು ಐಷಾರಾಮಿ ಕಾರುಗಳು, ನೂರಾರು ಎಕರೆ ಜಮೀನು, ಬೃಹತ್ ಬಂಗಲೆಗಳು, ಕೋಟ್ಯಂತರ ರೂ. ಮೌಲ್ಯದ ಅಪಾರ್ಟ್ಮೆಂಟ್ಗಳು, ಚಿನ್ನಾಭರಣ, ಐಷಾರಾಮಿ ವಸ್ತುಗಳು ಸೇರಿದಂತೆ ಕೋಟಿ ಕುಬೇರನಾಗಿರುವ ಅಜಿತ್ ರೈ ವಿರುದ್ಧ ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತಿದೆ.