ಪುತ್ತೂರು : ಕೆಲವು ದಿನಗಳ ಹಿಂದೆ ಉದ್ಯಮಿಯೋರ್ವರಿಗೆ ಹಲ್ಲೆ ನಡೆಸಿ ಹಣ ಮತ್ತು ಉಂಗುರವನ್ನು ಕಿತ್ತುಕೊಂಡು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಿಬ್ಬರಿಗೆ ಜಿಲ್ಲಾ ನ್ಯಾಯಾಲಯ ನೀರಿಕ್ಷಣಾ ಜಾಮೀನು ಮಂಜೂರು ಮಾಡಿದೆ.
ಬೆಂಗಳೂರಿನಲ್ಲಿ ಪಿ ಆರ್ ಸಿಕ್ಸ್ ಗ್ರೂಪ್ನಲ್ಲಿ ರಿಯಲ್ಎಸ್ಟೇಟ್ ಉದ್ಯಮ ಮಾಡಿಕೊಂಡಿದ್ದು, ಊರಿನಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದ ಪ್ರದೀಪ್ ಪಾಂಬಾರು ಎಂಬವರು ನೀಡಿದ್ದ ದೂರಿನ ಮೇರೆಗೆ ಮನೋಜ್ ಭಂಡಾರಿ ಮತ್ತು ಜಿತನ್ ರೈ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಜುಲೈ 18ರಂದು ತಾನು ಮತ್ತು ಸ್ನೇಹಿತ ದೇವರಾಜ್ ರವರು ಕಾರಿನಲ್ಲಿ ಪ್ರಗತಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಾವನನ್ನು ನೋಡಲು ಬಂದು ಊಟ ಮತ್ತು ನೀರನ್ನು ತರಲು ಆಸ್ಪತ್ರೆ ಸಮೀಪದ ಮೆಟ್ರೋಡೆನ್ ಹೋಟೆಲ್ ಗೆ ಬಂದು ಕಾರನ್ನು ತಿರುಗಿಸಿ ತೆರಳುತ್ತಿರುವ ಸಮಯ ರಾತ್ರಿ 10:45ರ ಸುಮಾರಿಗೆ ಹಿಂಬದಿಯಿಂದ ಡಸ್ಟರ್ ಕಾರು ಬಂದಿದ್ದು ಅವರು ಕಾರನ್ನು ಅಡ್ಡವಾಗಿ ನಿಲ್ಲಿಸಿ ಅದರಲ್ಲಿದ್ದ ಇಬ್ಬರು ವ್ಯಕ್ತಿಗಳು ಏಕಾಏಕಿಯಾಗಿ ಅವಾಚ್ಯ ಶಬ್ದಗಳಿಂದ ಬೈದು ಹೋಗಿದ್ದರು. ತಾನು ಮತ್ತು ದೇವರಾಜ್ ರವರು ಆಸ್ಪತ್ರೆಗೆ ಹೋಗಿ ಮನೆ ಕಡೆ ಹೋಗಲೆಂದು ಕಾರಿನಲ್ಲಿ ಲಿನೆಟ್ ಜಂಕ್ಷನ್ ತಲುಪಿದಾಗ ಅದೇ ಕಾರು ಪೆಟ್ರೋಲ್ ಪಂಪ್ ನಿಂದ ಏಕಾಏಕಿಯಾಗಿ ರಸ್ತೆಗೆ ಬಂದು ನಮ್ಮ ಕಾರಿಗೆ ಅಡ್ಡ ನಿಲ್ಲಿಸಿದ್ದರು. ನಾನು ಕಾರಿನಿಂದ ಇಳಿದ ಸಂದರ್ಭ ಡಸ್ಟರ್ ಕಾರಿನಲ್ಲಿದ್ದ ಇಬ್ಬರೂ ನನ್ನ ಕಾರಿನ ಡೋರ್ ಎಳೆದು ನನಗೆ ಹಲ್ಲೆ ನಡೆಸಿ ಪ್ಯಾಂಟಿನ ಕಿಸೆಯಲ್ಲಿದ್ದ ಪರ್ಸ್ ತೆಗೆದು ಅದರಲ್ಲಿದ್ದ ಸುಮಾರು 9000 ರೂ.ನಗದು ಮತ್ತು ಬಲ ಕೈ ಬೆರಳಲ್ಲಿದ್ದ ಐದು ಗ್ರಾಂ ತೂಕದ ಚಿನ್ನದ ಉಂಗುರವನ್ನು ಕಿತ್ತುಕೊಂಡು ಹೋಗಿದ್ದರು. ಎಂದು ಆರೋಪಿಸಿ ಪ್ರದೀಪ್ ಪಾಂಬಾರು ಅವರು ದೂರು ನೀಡಿದ್ದರು.
ಈ ಪ್ರಕರಣದ ಆರೋಪಿಗಳಾಗಿರುವ ಮನೋಜ್ ಭಂಡಾರಿ ಮತ್ತು ಜಿತನ್ ರೈಯವರಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರ ಖ್ಯಾತ ವಕೀಲ ಮಹೇಶ್ ಕಜೆ ವಾದಿಸಿದ್ದರು.