ಬೆಂಗಳೂರು: ಕಳೆದ ಕೆಲದಿನಗಳಿಂದ ಸಿಸಿಬಿ ವಿಚಾರಣೆ ಎದುರಿಸುತ್ತಿದ್ದ ರಾಗಿಣಿ ಮತ್ತು ಸಂಜನಾ ಪೈಕಿ ರಾಗಿಣಿಗೆ ನ್ಯಾಯಾಂಗ ಬಂಧನ ವಿಧಿಸಿದ ನ್ಯಾಯಾಲಯ, ಸಂಜನಾ ಆದೇಶ ಕಾಯ್ದಿರಿಸಿದೆ.

ಅಲ್ಲದೇ ರಾಗಿಣಿ ಜತೆ ಇತರ ಐವರು ಆರೋಪಿಗಳನ್ನು ಸಪ್ಟೆಂಬರ್ 27 ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ. ನ್ಯಾಯಾಲಯದ ಈ ಆದೇಶದಿಂದ ತುಪ್ಪದ ಬೆಡಗಿ ರಾಗಿಣಿ ಪರಪ್ಪನ ಅಗ್ರಹಾರದ ಪಾಲಾಗಿದ್ದಾರೆ.

ಇನ್ನು ನಟಿ ಸಂಜನಾರನ್ನು ಮತ್ತೆ ಸಿಸಿಬಿ ವಿಚಾರಣೆಗೆ ಕೋರಿದ ಹಿನ್ನೆಲೆಯಲ್ಲಿ ಸಂಜನಾ ಆದೇಶವನ್ನು 1 ನೇ ಎಸಿಎಂಎಂ ನ್ಯಾಯಾಲಯ ಕಾಯ್ದಿರಿಸಿದ್ದು, ರಾಗಿಣಿ ಹಾಗೂ ಇತರ ಆರೋಪಿಗಳು ಸಂಜೆ ವೇಳೆಗೆ ಪರಪ್ಪನ ಅಗ್ರಹಾರ ತಲುಪುವುದು ಖಚಿತವಾಗಿದೆ. ನಟಿ ರಾಗಿಣಿ ಜಾಮೀನು ಅರ್ಜಿ ವಿಚಾರಣೆ ಸಪ್ಟೆಂಬರ್ 16 ಕ್ಕೆ ಮುಂದೂಡಿಕೆಯಾದ ಹಿನ್ನೆಲೆಯಲ್ಲಿ ರಾಗಿಣಿ ಇನ್ನೆರಡು ದಿನ ಜೈಲಿನಲ್ಲಿರಲಿದ್ದಾರೆ.

ಇನ್ನು ಸಂಜನಾರನ್ನು ಸಿಸಿಬಿ ಮತ್ತಷ್ಟು ವಿಚಾರಣೆಗೆ ಒಳಪಡಿಸಲು ನ್ಯಾಯಾಲಯದ ಅನುಮತಿ ಕೋರಿದ್ದು, ಅನುಮತಿ ನೀಡಿದಲ್ಲಿ ಸಂಜನಾ ಸಿಸಿಬಿ ವಿಚಾರಣೆ ಎದುರಿಸಬೇಕಿದ್ದು, ಒಂದೊಮ್ಮೆ ಅನುಮತಿ ಸಿಗದೇ ಇದ್ದಲ್ಲಿ ಸಂಜನಾ ಕೂಡ ಜೈಲಿನಲ್ಲಿ ರಾಗಿಣಿಗೆ ಕಂಪನಿ ನೀಡಲಿದ್ದಾರೆ.

ಇಬ್ಬರು ನಟಿಯರ ಕಸ್ಟಡಿ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಸಿಸಿಬಿ ವಿಡಿಯೋ ಕಾನ್ಫರೆನ್ಸ್ ಮೂಲಕ ಇಬ್ಬರು ನಟಿಯರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿತ್ತು. ಈ ಪೈಕಿ ರಾಗಿಣಿಗೆ ಜೈಲಿನ ಹಾದಿ ಸ್ಪಷ್ಟವಾಗಿದೆ.

ರಾಗಿಣಿ ಜತೆ ವಿರೇನ್ ಖನ್ನಾ, ಪ್ರಶಾಂತ್ ರಂಕಾ, ಲೂಮ್ ಪೆಪ್ಪರ್, ರಾಹುಲ್, ನಿಯಾಜ್ ಕೂಡ ಜೈಲು ಸೇರಿದ್ದಾರೆ. ಈ ವೇಳೆ ರಾಗಿಣಿ ಅಸ್ತಮಾ, ಬೆನ್ನುನೋವಿನ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಅವಕಾಶ ಕೋರಿದ್ದು, ನ್ಯಾಯಾಧೀಶರು ಜೈಲಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲು ಸೂಚಿಸಿದ್ದಾರೆ.
