ಭೋಪಾಲ್: ಬಲವಂತವಾಗಿ ಮತಾಂತರ ಮಾಡಿರುವ ಆರೋಪದ ಮೇಲೆ ಕ್ರಿಶ್ಚಿಯನ್ ಪಾದ್ರಿಯನ್ನು ಪೊಲೀಸ್ ಠಾಣೆಯೊಳಗೇ ಥಳಿಸಿದ ಘಟನೆ ನಡೆದಿದೆ. ಭೋಪಾಲ್ನ ರಾಯ್ಪುರದ ಪುರಾಣಿ ಬಸ್ತಿ ಠಾಣೆಯಲ್ಲಿ ಈ ಕೃತ್ಯ ನಡೆದಿದೆ ಎಂದು ವರದಿಯಾಗಿದೆ.
ಹಿಂದೂಗಳನ್ನು ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ ಎಂಬ ಆರೋಪದಲ್ಲಿ ಚರ್ಚ್ನ ಫಾದ್ರಿ ಹಾಗೂ ದೂರುದಾರರ ಗುಂಪನ್ನು ಠಾಣೆಗೆ ವಿಚಾರಣೆಗಾಗಿ ಕರೆಸಲಾಗಿತ್ತು. ಈ ವೇಳೆ ತೀವ್ರ ವಾದ-ವಿವಾದ ನಡೆದಿದೆ. ಈ ವೇಳೆ ಕೋಪಗೊಂಡ ಗುಂಪು ಪಾದ್ರಿಯನ್ನು ಥಳಿಸಿದೆ.
ಭಟಗಾಂವ್ ಪ್ರದೇಶದಲ್ಲಿ ಬಲವಂತವಾಗಿ ಧಾರ್ಮಿಕ ಮತಾಂತರ ನಡೆಸುತ್ತಿರುವ ಬಗ್ಗೆ ಪೊಲೀಸರಿಗೆ ದೂರುಗಳು ಬಂದಿದ್ದವು. ಕ್ರಿಶ್ಚಿಯನ್ ಸಮುದಾಯದ ಇತರ ಕೆಲವು ಸದಸ್ಯರೊಂದಿಗೆ ಪೊಲೀಸ್ ಠಾಣೆಗೆ ಆಗಮಿಸಿದ ಪಾದ್ರಿ ಜೊತೆ, ಹಿಂದೂ ಸಂಘಟನೆಯ ಮುಖಂಡರು ಬಿರುಸಿನ ಮಾತುಕತೆ ನಡೆಸಿದರು.
ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಳ್ಳುತ್ತಿದ್ದಂತೆ ಕೆಲ ಹಿಂದು ನಾಯಕರು ಪಾದ್ರಿ ಮೇಲೆ ಹಲ್ಲೆ ನಡೆಸಿದ್ದಾರೆ. ಪಾದ್ರಿಗೆ ಚಪ್ಪಲಿ ಹಾಗೂ ಶೂಗಳಿಂದ ಹೊಡೆದಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದೆ. ಹಲ್ಲೆ ಮಾಡಿದವರ ವಿರುದ್ಧವೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.