ಹೈದರಾಬಾದ್: ಅಧಿಕ ರಕ್ತದೊತ್ತಡದಿಂದ ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ನಟ ರಜನಿಕಾಂತ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಆಸ್ಪತ್ರೆಯಿಂದ ತಲೈವಾ ಆರೋಗ್ಯದ ಬಗ್ಗೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಲಾಗಿದ್ದು, ಇಂದು ಅವರನ್ನ ಡಿಸ್ಚಾರ್ಜ್ ಮಾಡೋ ಸಾಧ್ಯತೆ ಇದೆ.
ಹೈದ್ರಾಬಾದ್ನ ಅಪೊಲೋ ಆಸ್ಪತ್ರೆಯಲ್ಲಿ ರಜಿನಿಕಾಂತ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 15 ಗಂಟೆಯಿಂದ ವೈದ್ಯರ ನಿಗಾದಲ್ಲಿದ್ದು, ಚೇತರಿಸಿಕೊಳ್ತಿದ್ದಾರೆ. ರಜಿನಿ ಚಿಕಿತ್ಸೆಗೆ ಸ್ಪಂದಿಸ್ತಿದ್ದಾರೆ ಎಂದು ಅಪೋಲೋ ಆಸ್ಪತ್ರೆ ವೈದ್ಯರು ಹೆಲ್ತ್ ಬುಲೆಟಿನ್ನಲ್ಲಿ ಹೇಳಿದ್ದಾರೆ.ರಜಿನಿಕಾಂತ್ ನಟಿಸುತ್ತಿದ್ದ ಅನ್ನಾತೆ ಸಿನಿಮಾ ಸೆಟ್ನಲ್ಲಿ ಕೆಲವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.
ಹೀಗಾಗಿ ರಜನಿ ಕೊರೊನಾ ಟೆಸ್ಟ್ಗೆ ಒಳಗಾಗಿ ಐಸೋಲೇಷನಲ್ಲಿದ್ದರು. ಆದರೆ ಕೊರೊನಾ ಲಕ್ಷಣಗಳಿಲ್ಲದಿದ್ರೂ, ರಕ್ತದೊತ್ತಡದಲ್ಲಿ ಏರುಪೇರಾಗಿ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದರು. ಈಗಾಗಲೇ ರಜನಿ ಅವರಿಗೆ ಕೋವಿಡ್ ರಿಪೋರ್ಟ್ ನೆಗೆಟಿವ್ ಬಂದಿದೆ. ಆದರೆ ಅವರ ರಕ್ತದೊತ್ತಡದಲ್ಲಿ ವಿಪರೀತ ಏರುಪೇರು ಆಗುತ್ತಿತ್ತು. ಹೀಗಾಗಿ ಇನ್ನಷ್ಟು ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ತಲೈವಾ ಆರೋಗ್ಯ ಚೇತರಿಕೆ ಕಂಡಿರುವುದರಿಂದ ಇಂದು ಅಥವಾ ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗೋ ಸಾಧ್ಯತೆ ಇದೆ.
ಅಂದ್ಹಾಗೆ ತಮಿಳುನಾಡು ಚುನಾವಣೆ ಹತ್ತಿರವಾಗ್ತಿದ್ದಂತೆ ರಾಜಕೀಯಕ್ಕೆ ಎಂಟ್ರಿ ನೀಡಲು ಸಿದ್ಧವಾಗಿರೋ ರಜಿನಿಕಾಂತ್ ಇದೇ ಡಿಸೆಂಬರ್ 31 ರಂದು ಹೊಸ ಪಕ್ಷ ಲಾಂಚ್ ಮಾಡಲು ನಿರ್ಧರಿಸಿದ್ದಾರೆ.