ಸೌಜನ್ಯ ಹತ್ಯೆ ಪ್ರಕರಣವನ್ನು ಮರು ತನಿಖೆ ನಡೆಸಬೇಕೆಂದು ಒತ್ತಾಯಿಸಿ ಪ್ರಬಲ ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ದಿ.ಸೌಜನ್ಯಳ ತಾಯಿ ಕುಸುಮಾವತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು.
ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ನಿಂತಿಕಲ್ಲಿನಿಂದ ಹೊರಟ ವಾಹನ ಜಾಥಾ ಪೈಚಾರಿಗೆ ತಲುಪಿ ಅಲ್ಲಿಂದ ನಡಿಗೆಯ ಮೂಲಕ ಸುಳ್ಯಕ್ಕೆ ಆಗಮಿಸಿತು. ಬಳಿಕ ನಡೆದ ಬೃಹತ್ ಸಭೆಯಲ್ಲಿ ಮಾತನಾಡಿದ ಪ್ರಬಲ ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ‘ ಸೌಜನ್ಯಳ ನ್ಯಾಯಕ್ಕಾಗಿ ಹೋರಾಟ ಮಾಡುವವರನ್ನು ಅನುಮಾನಿಸುವ, ಹೀಯಾಳಿಸುವ ಬದಲು ಪ್ರಕರಣವನ್ನು ಮರುತನಿಖೆ ನಡೆಸಿ ಅತ್ಯಾಚಾರ ಮಾಡಿದವರನ್ನು ಶಿಕ್ಷೆಗೆ ಒಳಪಡಿಸಿ. ನಾನೇ ಆರೋಪಿಯಾಗಿದ್ದರೂ ಸರಿ ಗಲ್ಲಿಗೇರಿಸಿ’ ಎಂದು ಆಗ್ರಹಿಸಿದರು.
ಸೌಜನ್ಯಾಳಿಗೆ ಈ ಬಾರಿ ನ್ಯಾಯ ಸಿಗಲೇಬೇಕು ಎಂಬ ಒತ್ತಾಯ ಕೇಳಿ ಬಂದಿದ್ದು ಪ್ರತಿಭಟನೆಯುದ್ದಕ್ಕೂ ‘ಜಸ್ಟೀಸ್ ಫಾರ್ ಸೌಜನ್ಯ’ ಎಂಬ ಕೂಗು ಕೇಳಿ ಬಂತು. ಪ್ರತಿಭಟನೆಯಲ್ಲಿ ಜಾತಿ, ಮತ, ಪಂಥ ಭೇಧವಿಲ್ಲದೇ ಎಲ್ಲರೂ ಪಾಲ್ಗೊಂಡು ಈ ಜಾಥಾಕ್ಕೆ ಕೈ ಜೋಡಿಸಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಅಹಿತರಕರ ಘಟನೆಗಳು ನಡೆಯದಂತೆ ಅಲ್ಲಲ್ಲಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿತ್ತು.
ಸುಳ್ಯ ನಗರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಈ ಮೂಲಕ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ನಗರದಲ್ಲಿ ಪೊಲೀಸ್ ಕಣ್ಗಾವಲಿದ್ದು, ಹದ್ದಿನ ಕಣ್ಣು ಇರಿಸಿದ್ದಾರೆ. ಇದಕ್ಕಾಗಿ ಅಡಿಷನಲ್ ಎಸ್ಪಿ ಧರ್ಮಪ್ಪರವರು ಸುಳ್ಯದಲ್ಲಿದ್ದು ಸಂಪೂರ್ಣ ನಿಗಾ ವಹಿಸಿದರು. ಎರಡು ಕೆಎಸ್ಆರ್ಪಿ ತುಕಡಿ ಸಿಬ್ಬಂದಿ ಸೇರಿದಂತೆ ಹತ್ತಾರು ಪೊಲೀಸರು ಹಾಗೂ ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿಗಳು ಸೇರಿದಂತೆ ಪುತ್ತೂರು ವಿಭಾಗದ ಡಿವೈಎಸ್ಪಿ ನೇತೃತ್ವದಲ್ಲಿ ಕಾರ್ಯಚರಿಸಲಾಯಿತು.