


ವಿಟ್ಲ: ಕರ್ನಾಟಕ ರಾಜ್ಯದಾದ್ಯಂತ ಶಾಲಾ ಕಾಲೇಜ್ ಗಳು ಪುನರಾರಂಭಗೊಂಡಿದ್ದು, ಶಾಲಾ ದಾಖಲಾತಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಅಗತ್ಯವಾಗಿದೆ. ಆದರೆ ಕಂದಾಯ ಇಲಾಖೆ ನಾಡಕಚೇರಿ ಸರ್ವರ್ ಸಮಸ್ಯೆಯಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದಾರೆ.
ಮಕ್ಕಳ ಹೆತ್ತವರು ತಮ್ಮ ಮಕ್ಕಳ ಶಾಲಾ ದಾಖಲಾತಿಗೆ ತೆರಳಿದಾಗ ಇತರ ದಾಖಲೆಗಳ ಜತೆಗೆ ಜಾತಿ ಆದಾಯ ಪ್ರಮಾಣ ಸಲ್ಲಿಸಬೇಕು ಎಂದು ಶಿಕ್ಷಣ ಸಂಸ್ಥೆಗಳು ಹೇಳುತ್ತದೆ. ಇದೀಗ ಸರ್ವರ್ ಸಮಸ್ಯೆಯಿಂದ ಜನರ ಪರದಾಟ ನಡೆಸುವಂತಾಗಿದೆ.
ಪಿಡಿಓ ಮತ್ತು ವಿಎಓ ಹುದ್ದೆಗೆ ಹಲವು ಮಂದಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಉದ್ದೇಶದಿಂದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸರಿಯಾದ ಸಮಯಕ್ಕೆ ಸಿಗದೇ ತೊಂದರೆ ಅನುಭವಿಸಿದ್ದಾರೆ.
ಗ್ರಾಮ ಕರಣಿಕರ ವರದಿ ಮೂಲಕ ನೆಮ್ಮದಿ ಕೇಂದ್ರ, ಸೈಬರ್ ಮೂಲಕ ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ಆದರೆ ಇಲ್ಲಿಗೆ ಹೋದಾಗ ಸರ್ವರ್ ಸಮಸ್ಯೆ ಯಾವುದೇ ಅರ್ಜಿ ವಿಲೇವಾರಿ ಆಗುತ್ತಿಲ್ಲ. ಅರ್ಜಿ ಸಲ್ಲಿಸಿದ ಬಳಿಕ ಆದಾಯ ಪ್ರಮಾಣ ಪತ್ರ ಪಡೆಯಲು ಒಟ್ಟು 21 ಕೆಲಸದ ದಿನಗಳಲ್ಲಿ ಪ್ರಮಾಣ ಪತ್ರ ದೊರೆಯುತ್ತಿದೆ. ಇದೀಗ ಕಳೆದ ಒಂದು ವಾರದಿಂದ ಸರ್ವರ್ ಕೈ ಕೊಟ್ಟ ಕಾರಣ ಅರ್ಜಿ ವಿಲೇವಾರಿ ವಾದರೂ ಪ್ರಮಾಣ ಪತ್ರ ಸಿಗುತ್ತಿಲ್ಲ. ಸೈಬರ್ ನವರು ಸರ್ವರ್ ಸಮಸ್ಯೆ ನಡುವೆ ಅರ್ಜಿ ಹಾಕಲು ಪ್ರಯತ್ನಿಸಿದರೂ ಅವರ ಖಾತೆ 40 ರೂ.ಕಡಿತಗೊಳ್ಳುತ್ತದೆ. ಆದರೆ ಅರ್ಜಿ ಮಾತ್ರ ಸಲ್ಲಿಕೆ ಆಗುತ್ತಿಲ್ಲ. ಇದರಿಂದ ಸೇವಾ ಕೇಂದ್ರದವರಿಗೆ ಹಣ ನಷ್ಟವಾಗುತ್ತದೆ.
ಒಮ್ಮೆ ಜಾತಿ ಆದಾಯ ಪ್ರಮಾಣ ಪತ್ರ ಪಡೆದವರು ಮುಂದಿನ ಐದು ವರ್ಷಗಳ ವರೆಗೆ ಮಾತ್ರ ಅದರ ಮಾನ್ಯತೆ ಇರುತ್ತದೆ. ಐದು ವರ್ಷಗಳ ಬಳಿಕ ಮತ್ತೆ ಹೊಸದಾಗಿಯೇ ಅರ್ಜಿ ಸಲ್ಲಿಸಬೇಕು. 2021ರಲ್ಲಿ ರೇಶನ್ ಕಾರ್ಡ್ ನೀಡಿ, ಪ್ರಮಾಣ ಪತ್ರ ನವಿಕರಿಸುವ ಅವಕಾಶ ಇತ್ತು. ಅದನ್ನು ಇಲಾಖೆ ತೆಗೆದು ಹಾಕಿದೆ. ಕಂದಾಯ ಇಲಾಖೆ ವಿದ್ಯಾರ್ಥಿಗಳ ಭವಿಷ್ಟದ ಜತೆ ಚೆಲ್ಲಾಟ ವಾಡುತ್ತಿದೆ ಎಂದು ಮಕ್ಕಳ ಹೆತ್ತವರು ಆರೋಪಿಸಿದ್ದಾರೆ.