ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಕಲೆ ಅನ್ನೋದು ಕಲೆವರಿಗೆ ರಕ್ತಗತವಾಗಿ ಬಂದಿರುತ್ತದೆ. ಕಿರಿ ವಯಸ್ಸಿನಲ್ಲಿಯೇ ಕಲಾ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡು, ಅನೇಕ ವೇದಿಕೆಗಳ ಏಣಿಯನ್ನು ಏರುತ್ತಾ ಇದೀಗ ದೊಡ್ಡ ವೇದಿಕೆಯ ಮೂಲಕ ಹೆಸರುವಾಸಿಯಾದ ವಿಟ್ಲದ ಹೆಮ್ಮೆಯ ಪ್ರತಿಭೆ ರಿಷಿತ್ರಾಜ್ ವಿಟ್ಲ.
ಅತೀ ಕಿರಿ ವಯಸ್ಸಿನಲ್ಲಿ ಅತೀ ದೊಡ್ಡ ವೇದಿಕೆಯನ್ನು ಹತ್ತಿ ತನ್ನ ಪ್ರತಿಭೆಯ ಮೂಲಕ ಮಿಂಚುತ್ತಿರುವ ಬಾಲ ಪ್ರತಿಭೆ ರಿಷಿತ್ ರಾಜ್ ಮೂಲತ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದವರು. ಯಕ್ಷಗಾನ, ನಾಟಕ, ನೃತ್ಯ, ಮಾತುಗಾರಿಕೆ, ಸಂಗೀತ ಹೀಗೆ ಸಾಂಸ್ಕೃತಿಕ ಎಲ್ಲಾ ರಂಗದಲ್ಲಿ ತನ್ನನ್ನು ತೊಡಗಿಸಿಕೊಂಡ ರಿಷಿತ್ ರಾಜ್ ಇದೀಗ ಝೀ ಕನ್ನಡ ವಾಹಿನಿಯ ಜನ ಮೆಚ್ಚಿದ ರಿಯಾಲಿಟಿ ಶೋ ಡ್ರಾಮಾ ಜ್ಯೂನಿಯರ್ ಸೀಸನ್-5 ಇದರಲ್ಲಿ ಆಯ್ಕೆಯಾಗಿ ರಾಜ್ಯಾದ್ಯಂತ ಮನ-ಮನೆಗಳಲ್ಲಿ ಮಿಂಚುತ್ತಿದ್ದಾರೆ.
ಡ್ರಾಮಾ ಜ್ಯೂನಿಯರ್ ಸೀಸನ್-5 ಆಡಿಷನ್ ನಲ್ಲಿ ರಾಜ್ಯದ ಹಲವು ಕಡೆಗಳಿಂದ ಸುಮಾರು 35,000 ಬಾಲ ಪ್ರತಿಭಾ ಸ್ಪರ್ಧಿಗಳು ಭಾಗವಹಿಸಿದ್ದು, ಈ ಪೈಕಿ ಮೆಗಾ ಆಡಿಷನ್ಗೆ 35 ಸ್ಪರ್ಧಾಳುಗಳನ್ನು ಆಯ್ಕೆಮಾಡಲಾಗಿತ್ತು, ಈ ಪೈಕಿ 24 ಬಾಲ ಪ್ರತಿಭೆಗಳನ್ನು ಆಯ್ಕೆಮಾಡಲಾಗಿದೆ. ಇವರಲ್ಲಿ ವಿಟ್ಲದ ಪ್ರತಿಭೆ ರಿಷಿತ್ ರಾಜ್ ವಿಟ್ಲ ಇವರು ಆಯ್ಕೆಯಾಗಿದ್ದು ಹೆಮ್ಮೆಯಾಗಿದೆ. ಮೆಗಾ ಆಡಿಷನ್ನಲ್ಲಿ ನನ್ನ ಪ್ರೀತಿಯ ರಾಮು ಎಂಬ ಕುರುಡನ ಪಾತ್ರವನ್ನು ಅಭಿನಯಿಸಿದ ರಿಷಿತ್ ರಾಜ್ ತನ್ನ ಅದ್ಭುತ ನಟನೆಯ ಮೂಲಕ ನೋಡುಗರ ಕಣ್ಣಂಚಲ್ಲಿ ಕಣ್ಣೀರು ಹರಿಸಿದ್ದರು. ರಿಷಿತ್ ರಾಜ್ ಅಭಿನಯಕ್ಕೆ ಕ್ರೇಜಿ ಸ್ಟಾರ್ ರವಿಚಂದ್ರನ್, ಡಿಂಪಲ್ ಕ್ಷೀನ್ ರಚಿತಾ ರಾಮ್, ಹಾಗೂ ಹಿರಿಯ ಚಿತ್ರನಟಿ ಲಕ್ಷ್ಮೀ ಶಹಬ್ಬಾಸ್ ಎಂದಿದ್ದಾರೆ.
ಈ ಹಿಂದೆ ಡೈಜಿವರ್ಲ್ಡ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜ್ಯೂನಿಯರ್ ಸೆಲೆಬ್ರೆಟೀಸ್ ರಿಯಾಲಿಟಿ ಶೋ ದಲ್ಲಿ ರಿಷಿತ್ ರಾಜ್ ತಮ್ಮ ಪ್ರತಿಭೆಯ ಮೂಲಕ ಸೆಮಿ ಫಿನಾಲೆ ಹಂತಕ್ಕೆ ತಲುಪಿದ್ದರು.
ರಿಷಿತ್ ರಾಜ್ ವಿಟ್ಲ ಇವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆರ್ ಕೆ ಕಲಾ ಸಂಸ್ಥೆ ವಿಟ್ಲ ಇದರ ನಿರ್ದೇಶಕರಾದ ರಾಜೇಶ್ ವಿಟ್ಲ ಹಾಗೂ ಧನಲಕ್ಷ್ಮೀ ದಂಪತಿಯ ಪುತ್ರನಾಗಿದ್ದು, ದ.ಕ.ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲ ಇಲ್ಲಿನ ನಾಲ್ಕನೇ ತರಗತಿಯ ವಿದ್ಯಾರ್ಥಿಯಾಗಿದ್ದಾರೆ. ಪ್ರತೀ ಶನಿವಾರ ರಾತ್ರಿ 9 ಗಂಟೆಗೆ ನೆಚ್ಚಿನ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಡ್ರಾಮಾ ಜ್ಯೂನಿಯರ್ ಸೀಸನ್-5 ಶೋ ನೋಡಿ, ವೋಟಿಂಗ್ ಮಾಡುವ ವಿಟ್ಲದ ಪ್ರತಿಭೆಯನ್ನು ಪ್ರೋತ್ಸಾಹಿಸಿ.