ಬೆಂಗಳೂರು: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೋಮವಾರ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಉಡುಪಿಯ ಶ್ರೀ ಪೆಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರನ್ನು ಭೇಟಿ ಮಾಡಿದರು. ಈ ವೇಳೆ ಆಂಧ್ರಪ್ರದೇಶದಲ್ಲಿ ದೇವಾಲಯ ವಿಧ್ವಂಸ ಘಟನೆಗಳ ಬಗೆಗೆ ಚರ್ಚಿಸಲಾಗಿದೆ ಎಂದು ಸಭೆಯ ಮೂಲಗಳು ತಿಳಿಸಿವೆ.
ವಿದ್ಯಾಪೀಠದಲ್ಲಿ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯ ವೃಂದಾವನಕ್ಕೆ ಗೌರವ ಸಲ್ಲಿಸಿದ ಭಾಗವತ್, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಟ್ರಸ್ಟಿಗಳಲ್ಲಿ ಒಬ್ಬರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯನ್ನು ಭೇಟಿಯಾದರು.
ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಸ್ಥಳದಲ್ಲಿ ನಡೆಯುತ್ತಿರುವ ಮಂದಿರ ನಿರ್ಮಾಣ ಬಗೆಗಿನ ಪ್ರಗತಿಯನ್ನು ದೀರ್ಘವಾಗಿ ಚರ್ಚಿಸಿದ ಭಾಗವತ್ ನಂತರ ಆಂಧ್ರ ಪ್ರದೇಶದಲ್ಲಿ ವರದಿಯಾಗಿರುವ ದೇವಾಲಯದ ವಿಧ್ವಂಸಕ ಕೃತ್ಯದ ಕುರಿತು ಸ್ವಾಮೀಜಿಯೊಂದಿಗೆ ಮಾತುಕತೆ ನಡೆಸಿದ್ದಾರೆ.
ದೇವಾಲಯದ ವಿಧ್ವಂಸಕ ಕೃತ್ಯಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶದಲ್ಲಿ ಏನಾಗುತ್ತಿದೆ ಎನ್ನುವ ಬಗ್ಗೆ ಆರ್ಎಸ್ಎಸ್ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಭಾಗವತ್ ಪೆಜಾವರ ಶ್ರೀಗಳಿಗೆ ತಿಳಿಸಿದ್ದಾರೆ. ಆಂಧ್ರ ಪ್ರದೇಶದಲ್ಲಿ ಹಿಂದೂಗಳ ಹಿತಾಸಕ್ತಿ ಕಾಪಾಡಲು ಆರ್ಎಸ್ಎಸ್ ಕರ್ತವ್ಯ ಬದ್ದವಾಗಿದೆ ಎಂದು ಅವರು ಹೇಳಿದರು.
ದೇವಾಲಯದ ವಿಧ್ವಂಸಕ ಘಟನೆಗಳ ಬಗ್ಗೆ ಶ್ರೀ ವಿಶ್ವಪ್ರಸನ್ನ ತೀರ್ಥರು ಆರ್ಎಸ್ಎಸ್ ಮುಖ್ಯಸ್ಥರೆದುರು ತಮ್ಮ ಮನದಾಳದ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಹಿಂದೂಗಳ ಒಳಿತಿಗಾಗಿ ಶ್ರೀ ವಿಶ್ವೇಶ ತೀರ್ಥರು ನೀಡಿದ ಕೊಡುಗೆಯನ್ನು ನೆನಪಿಸಿಕೊಂಡ ಆರ್ಎಸ್ಎಸ್ ಮುಖ್ಯಸ್ಥರು ಅವರೊಬ್ಬ ಮಹಾನ್ ಸಂತ ಮತ್ತು ಅವರ ವೃಂದಾವನಕ್ಕೆ ಗೌರವ ಸಲ್ಲಿಸುವ ಮೂಲಕ ನನ್ನ ಹೃದಯದಲ್ಲಿ ದಿವ್ಯತೆ ಮೂಡಿದೆ ಎಂದರು.