ಮಾಣಿ : ಮಾಣಿ ಪೆರಾಜೆ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮೇ 6 ರಂದು 2024-25 ನೇ ಶೈಕ್ಷಣಿಕ ವರ್ಷದ ಎಸ್. ಎಸ್. ಎಲ್.ಸಿ. ವಿದ್ಯಾರ್ಥಿಗಳಿಗೆ ಪಠ್ಯ ತರಗತಿಗಳನ್ನು ಆರಂಭಿಸುವ ಮೊದಲಾಗಿ ವೃತ್ತಿ ಮಾರ್ಗದರ್ಶನ ಮಾಹಿತಿ ಕಾರ್ಯಾಗಾರ ನಡೆಯಿತು.
ಈ ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿ ದೀಪ ಪ್ರಜ್ವಲನದ ಮೂಲಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಬಾಲವಿಕಾಸ ಟ್ರಸ್ಟಿನ ಅಧ್ಯಕ್ಷರಾದ ಪ್ರಹ್ಲಾದ ಶೆಟ್ಟಿ ಜೆ, “ನಮ್ಮ ಇಂದಿನ ತಂತ್ರಜ್ಞಾನ ಯುಗದಲ್ಲಿ ನಾವೆಲ್ಲರೂ ಆತ್ಮ ವಿಶ್ವಾಸದಿಂದ ಪ್ರತಿಯೊಂದು ಕ್ಷೇತ್ರದ ಲ್ಲಿಯೂ ಸ್ಪರ್ಧಾತ್ಮಕವಾಗಿ ಚಿಂತಿಸುವ ಅನಿವಾರ್ಯತೆ ಇದೆ. ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯೂ ಎಸ್. ಎಸ್. ಎಲ್. ಸಿ. ವಿದ್ಯಾಭ್ಯಾಸದ ನಂತರ ಸರಿಯಾದ ವೃತ್ತಿಪರ ಕೋರ್ಸನ್ನು ಆಯ್ಕೆ ಮಾಡಿ, ಸೂಕ್ತವಾದ ತರಬೇತಿ ಯನ್ನು ಪಡೆದು, ಜೀವನದಲ್ಲಿ ನಿರ್ದಿಷ್ಟ ಗುರಿಯೆಡೆಗೆ ತಲುಪುವ ಪ್ರಯತ್ನ ಮಾಡಬೇಕು. ಇದು ಪ್ರತಿಯೊಬ್ಬ ವಿದ್ಯಾರ್ಥಿಯ ಜವಾಬ್ದಾರಿ. ಮಕ್ಕಳನ್ನು ಆ ನಿರ್ದಿಷ್ಟ ಗುರಿಯೆಡೆಗೆ ನಡೆಸುವ ಜವಾಬ್ದಾರಿ ಪೋಷಕರದ್ದು. ಇಂತಹ ಜವಾಬ್ದಾರಿಯನ್ನು ಅರಿತುಕೊಳ್ಳುವಲ್ಲಿ ಬಾಲವಿಕಾಸ ಶಾಲೆಯಲ್ಲಿ ನಡೆಯುತ್ತಿರುವ ವೃತ್ತಿ ಮಾರ್ಗದರ್ಶನ ಮಾಹಿತಿ ಕಾರ್ಯಾಗಾರ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಈ ಕಾರ್ಯಾಗಾರದ ಸಂಪೂರ್ಣ ಪ್ರಯೋಜನವನ್ನು ವಿದ್ಯಾರ್ಥಿಗಳು ಹಾಗೂ ಪೋಷಕರು ಪಡೆದುಕೊಳ್ಳಬೇಕು ಎಂಬುದೇ ನಮ್ಮ ಸದುದ್ದೇಶ ” ಎಂದರು.
ವೃತ್ತಿ ಮಾರ್ಗದರ್ಶನ ಮಾಹಿತಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಭಾರತೀಯ ವಾಯುಸೇನೆಯ ನಿವೃತ್ತ ಯೋಧ ಹಾಗೂ ಅಂತರಾಷ್ಟ್ರೀಯ ತರಬೇತುದಾರರಾದ ಶ್ರೀ ಪ್ರಕಾಶ್ ಕುಕ್ಕಿಲ, ಎಸ್. ಎಸ್. ಎಲ್. ಸಿ. ಯ ನಂತರ ಮುಂದೇನು? ಯಾವ ಯಾವ ವೃತ್ತಿಪರ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ತರಬೇತಿಯನ್ನು ಪಡೆದುಕೊಳ್ಳಬಹುದು? ಆ ಮೂಲಕ ಜೀವನದಲ್ಲಿ ನಿರ್ದಿಷ್ಟ ಗುರಿಯೆಡೆಗೆ ತಲುಪಿ ಯಶಸ್ಸನ್ನು ಸಾಧಿಸುವುದು ಹೇಗೆ? ಎಂಬ ಅನೇಕ ಪ್ರಶ್ನೆಗಳ ಬಗ್ಗೆ ಸೂಕ್ತವಾದ ಮಾಹಿತಿ ಹಾಗೂ ಮಾರ್ಗದರ್ಶನವನ್ನು ನೀಡಿದರು.
ಕಾರ್ಯಾಗಾರದ ಕೊನೆಯಲ್ಲಿ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ಪೋಷಕರ ಪರವಾಗಿ ಮಾತನಾಡಿದ ಪ್ರತಿಭಾ ಕೆ ಬಾಲವಿಕಾಸ ಶಾಲೆಯಲ್ಲಿ ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಗಳಿಗೆ ಪಠ್ಯ ತರಗತಿಗಳನ್ನು ಆರಂಭಿಸುವ ಮೊದಲಾಗಿ ನಡೆಸಿರುವಂತಹ ವೃತ್ತಿ ಮಾರ್ಗದರ್ಶನ ಮಾಹಿತಿ ಕಾರ್ಯಾಗಾರ ಬಹಳಷ್ಟು ಪ್ರಯೋಜನಕಾರಿಯಾಗಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರು, ಆರಂಭದಲ್ಲಿಯೇ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ನಿರ್ದಿಷ್ಟ ಗುರಿಯೆಡೆಗೆ ಮುನ್ನಡೆಯುವಲ್ಲಿ ಸಹಕಾರಿಯಾಗಿದೆ ಎಂದು ಶ್ಲಾಘಿಸಿದರು.
ಈ ಮಾಹಿತಿ ಕಾರ್ಯಾಗಾರದಲ್ಲಿ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ, ಶಾಲಾ ಸಿಬ್ಬಂದಿ ವರ್ಗ, ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಭಾಗವಹಿಸಿದ್ದರು.
ಶಾಲಾ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಮಾಹಿತಿ ಕಾರ್ಯಾಗಾರವನ್ನು ಶಾಲಾ ಆಡಳಿತಾಧಿಕಾರಿ ರವೀಂದ್ರ ದರ್ಬೆ ಸ್ವಾಗತಿಸಿ, ಸಹಶಿಕ್ಷಕಿ ಸುಧಾ ಎನ್. ರಾವ್ ವಂದಿಸಿ, ಸಹಶಿಕ್ಷಕಿ ಸುಪ್ರಿಯಾ ಡಿ. ಕಾರ್ಯಕ್ರಮವನ್ನು ನಿರೂಪಿಸಿದರು.