
ಹೈದರಾಬಾದ್: ತೆಲುಗು ನಟ ಸಾಯಿ ಧರಂ ತೇಜ್ ಚಲಾಯಿಸುತ್ತಿದ್ದ ಬೈಕ್ ಗಂಭೀರ ಅಪಘಾತಕ್ಕೆ ಒಳಗಾಗಿರುವ ಘಟನೆ ಹೈದರಾಬಾದ್ನ ಮಾದಾಪುರ ಕೇಬಲ್ ಬ್ರಿಡ್ಜ್ ಬಳಿ ನಡೆದಿದೆ. 34 ವರ್ಷದ ಈ ನಟ ತನ್ನ ಸ್ಪೋರ್ಟ್ಸ್ ಬೈಕ್ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ಅಪಘಾತದಲ್ಲಿ ನಟ ಸಾಯಿ ಧರಂ ತೇಜ್ ಗಂಭೀರವಾಗಿ ಗಾಯಗೊಂಡಿದ್ದು, ಹೈದರಾಬಾದ್ನ ಖಾಸಗಿ ಆಸ್ಪತ್ರೆಯ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದ ವೇಳೆ ಸಾಯಿ ಧರಂ ತೇಜ್ ಹೆಲ್ಮೆಟ್ ಧರಿಸಿದ್ದರು ಆದ್ದರಿಂದ ತಲೆ ಭಾಗಕ್ಕೆ ಬೀಳಬೇಕಾಗಿದ್ದ ತೀವ್ರ ಸ್ವರೂಪದ ಏಟು ತಪ್ಪಿಹೋಗಿದೆ. ಅತಿಯಾದ ವೇಗದಲ್ಲಿ ಬೈಕ್ ಓಡಿಸಿದ್ದರಿಂದಲೇ ಅನಾಹುತ ಸಂಭವಿಸಿರುವುದು ಮೇಲ್ನೋಟಕ್ಕೆ ಕಾಣಿಸಿದ್ದು, ಸ್ಪೋರ್ಟ್ಸ್ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಸಾಯಿ ಧರಂ ತೇಜ್ ಅವರ ಬಲಗಣ್ಣು, ಎದೆ, ಹೊಟ್ಟೆ ಭಾಗದಲ್ಲಿ ಗಾಯಗಳಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ಅಪಘಾತಕ್ಕೆ ಒಳಗಾಗಿರುವ ಯುವ ನಟನನ್ನು ನೋಡಲು ನಟ ಚಿರಂಜೀವಿ, ಪವನ್ ಕಲ್ಯಾಣ್ ಸೇರಿದಂತೆ ಕೆಲವರು ಆಸ್ಪತ್ರೆಗೆ ಆಗಮಿಸಿದ್ದಾರೆ. ಸಾಯಿ ಧರಂ ತೇಜ್ ಅವರನ್ನು ನೋಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪವನ್ ಕಲ್ಯಾಣ್, ಸಾಯಿ ಧರಮ್ ತೇಜ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರು ಕೋಮಾದಲ್ಲಿ ಇದ್ದಾರೆ. ಆದರೂ ಶೀಘ್ರದಲ್ಲೇ ಚೇತರಿಸಿಕೊಳ್ಳುವ ಭರವಸೆ ಇದೆ. ಆ ಬಗ್ಗೆ ಚಿಂತಿಸಬೇಕಾದದ್ದು ಏನೂ ಇಲ್ಲ. ಇನ್ನೂ ಉತ್ತಮ ಚಿಕಿತ್ಸೆ ಬೇಕಾದಲ್ಲಿ ಅದಕ್ಕೆ ಸೂಕ್ತ ವ್ಯವಸ್ಥೆಯೂ ಆಗಲಿದೆ. ಗಾಬರಿ ಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.




