ಕಾಪು: ಹೆಸರಾಂತ ಸಮಾಜ ಸೇವಕ, ಕಾಪು ರಂಗಿತರಂಗ ನಾಟಕ ಸಂಸ್ಥೆಯ ಸ್ಥಾಪಕ ಲೀಲಾಧರ ಶೆಟ್ಟಿ ಹಾಗೂ ಅವರ ಪತ್ನಿ ವಸುಂಧರಾ ಶೆಟ್ಟಿ ಜೊತೆಯಾಗಿ ಆತ್ಮಹತ್ಯೆ ಮಾಡಿರುವ ಆಘಾತಕಾರಿ ಘಟನ ನಿನ್ನೆ ರಾತ್ರಿ ನಡೆದಿದೆ.
ಸರಳ ಸಜ್ಜನ ವ್ಯಕ್ತಿಯಾಗಿದ್ದ ಲೀಲಾಧರ ಶೆಟ್ಟಿ ಅವರು ಒಂದು ಬಾರಿ ಕಾಪು ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದರು. ಅತ್ಯುತ್ತಮ ನಾಟಕ ತಂಡ ಹೊಂದಿದ್ದರು. ಕಾಪು “ರಂಗಿತರಂಗ” ತಂಡದ ಯಜಮಾನ ಆಗಿ ಭಾರೀ ಜನಪ್ರಿಯತೆ ಪಡೆದಿದ್ದರು. ಅಶಕ್ತರ ನೆರವಿಗೆ ಧಾವಿಸುವ ಅವರು ಯಾವಾಗಲೂ ಸಮಾಜದ ಪರವಾಗಿ ಕಾಳಜಿ ಹೊಂದಿದ್ದರು. ಕಾಪು ಶಾಸಕ ಗುರ್ಮ ಸುರೇಶ್ ಶೆಟ್ಟಿಯವರ ಅತ್ಯಂತ ಆಪ್ತರಾಗಿದ್ದ ಅವರು ಕಾಪು ಬಂಟರ ಸಂಘದ ಮಾಜಿ ಅಧ್ಯಕ್ಷ, ಭಜನಾ ಮಂಡಳಿಯ ಸಂಚಾಲಕ, ಅತ್ಯುತ್ತಮ ನಟ ಮತ್ತು ನಿರ್ದೇಶಕ ಆಗಿದ್ದರು. ಅವರು ದಂಪತಿ ಸಹಿತವಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಅವರ ಸಾವಿರಾರು ಅಭಿಮಾನಿಗಳಿಗೆ ಆಘಾತವುಂಟು ಮಾಡಿದೆ. ಇತ್ತೀಚೆಗೆ ತನ್ನ ಹೊಸ ನಾಟಕ ರಚನೆಯನ್ನು ಮಾಡಿದ್ದ ಇವರು ಅದರಲ್ಲಿ ಯಶಸ್ವಿಯಾಗುವ ಆಶಾಭಾವನೆ ಹೊಂದಿದ್ದರು.
ಮೃತರ ಅಂತಿಮ ದರ್ಶನ ಇಂದು ಸಂಜೆ ನಾಲ್ಕು ಗಂಟೆಗೆ ಕಾಪು ಮಜೂರು ಕರಂದಾಡಿ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.