ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸಿಆರ್ಝಡ್ ಹಾಗೂ ನಾನ್ಸಿಆರ್ಝಡ್ ವಲಯದಲ್ಲಿ ಜೂ. 1ರಿಂದ ಜುಲೈ 31ರವರೆಗೆ ಮರಳುಗಾರಿಕೆ ನಿಷೇಧಗೊಳ್ಳಲಿದ್ದು, ಮರಳು ತೆಗೆಯುವ ಕಾರ್ಯ ಸಂಪೂರ್ಣ ಸ್ಥಗಿತಗೊಳ್ಳಲಿದೆ.
ಹಾಲಿ ಅವಧಿಯ ನವೆಂಬರ್ನಿAದ ಮೇ 10ರ ವರೆಗೆ ಸಿಆರ್ಝಡ್ ಹಾಗೂ ನಾನ್ಸಿಆರ್ಝಡ್ ವಲಯಗಳಲ್ಲಿ ಒಟ್ಟು 3,93,539 ಮೆಟ್ರಿಕ್ ಟನ್ ಮರಳು ತೆರವುಗೊಳಿಸಲಾಗಿದೆ. ಉಡುಪಿ ಜಿಲ್ಲೆಯ ಸಿಆರ್ಝಡ್ ವಲಯದಲ್ಲಿ ಒಟ್ಟು 4.55 ಲ.ಮೆ.ಟನ್ ಮರಳು ತೆಗೆಯಲಾಗಿದೆ.
ಸಿಆರ್ಝಡ್ನಲ್ಲಿ ಮರಳು ತೆರವಿಗೆ ನೀಡಿರುವ ಪರವಾನಿಗೆ ಸೆಪ್ಟಂಬರ್ ವರೆಗೆ ಇರುವುದರಿಂದ ಆಗಸ್ಟ್ 1ರಿಂದ ಸೆಪ್ಟಂಬರ್ ಕೊನೆಯ ವರೆಗೆ ಮರಳು ತೆಗೆಯಬಹುದಾಗಿದೆ. ಬಳಿಕ ಹೊಸದಾಗಿ ಬೆಥಮೆಟ್ರಿಕ್ ಸರ್ವೇ, ಮರಳು ದಿಬ್ಬಗಳ ಗುರುತಿಸುವಿಕೆ, ಪರಿಸರ ಇಲಾಖೆಯ ಅನುಮತಿ ಇತ್ಯಾದಿ ಪ್ರಕ್ರಿಯೆಗಳು ನಡೆಯಬೇಕು.
ಸಿಆರ್ಝಡ್ನೊಳಗೆ ಬರುವ ನೇತ್ರಾವತಿ ನದಿಯಲ್ಲಿ 8, ಗುರುಪುರ ನದಿಯಲ್ಲಿ 4 ಹಾಗೂ ಶಾಂಭವಿ ನದಿಯಲ್ಲಿ 1 ಬ್ಲಾಕ್ ಸೇರಿದಂತೆ 13 ಬ್ಲಾಕ್ಗಳಲ್ಲಿ (ದಿಬ್ಬ) ಈ ಬಾರಿ ಮರಳು ತೆರವಿಗೆ ಪರಿಸರ ಇಲಾಖೆಯಿಂದ ಅನುಮತಿ ಲಭಿಸಿ ಎರಡು ಹಂತಗಳಲ್ಲಿ 105 ಮಂದಿ ಗುತ್ತಿಗೆದಾರರಿಗೆ ಮರಳು ತೆಗೆಯಲು ಪರವಾನಿಗೆ ನೀಡಲಾಗಿತ್ತು.
ನಾನ್ ಸಿಆರ್ಝಡ್ನಲ್ಲಿ ಇ-ಟೆಂಡರ್ ಮೂಲಕ 16 ಬ್ಲಾಕ್ಗಳ ಗುತ್ತಿಗೆ ಮಂಜೂರು ಮಾಡಲಾಗಿದ್ದು, 1,66,684 ಮೆ.ಟನ್ ಮರಳು ತೆರವುಗೊಳಿಸಲಾಗಿದೆ.ಕೊರೊನಾ 2ನೇ ಅಲೆ ಮತ್ತು ಲಾಕ್ಡೌನ್ ಕಾರಣದಿಂದ ಕಾರ್ಮಿಕರ ಕೊರತೆ ಎದುರಾದ್ದರಿಂದ ಮರಳುಗಾರಿಕೆ ನಿರತ ಬಹುತೇಕ ದೋಣಿಗಳು ಈಗಾಗಲೇ ದಡಸೇರಿವೆ.
ಕಾರ್ಮಿಕರಲ್ಲಿ ಬಹುಪಾಲು ಮಂದಿ ಬಿಹಾರ, ಝಾರ್ಖಂಡ್, ಉತ್ತರ ಪ್ರದೇಶ, ಒಡಿಶಾ ಹಾಗೂ ಪಶ್ಚಿಮ ಬಂಗಾಲ ಸೇರಿದಂತೆ ಉತ್ತರ ಭಾರತದವರಾಗಿದ್ದು ಊರಿಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ ಲಾಕ್ಡೌನ್ ಹಿನ್ನೆಲೆಯಲ್ಲಿ ನಿರ್ಮಾಣ ಚಟುವಟಿಕೆಗಳು ಕುಂಠಿತಗೊAಡಿರುವ ಹಿನ್ನೆಲೆಯಲ್ಲಿ ಮರಳು ಸಮಸ್ಯೆ ಉಂಟಾಗಿಲ್ಲ.