




ಮಡಿಕೇರಿ: ಕಳೆದೆರಡು ವರ್ಷಗಳಿಂದ ಸೋಮವಾರಪೇಟೆ ತಾಲೂಕಿನ ಕೆಲ ಗ್ರಾಮಗಳಲ್ಲಿ ಶ್ರೀಗಂಧ ಮರಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪದಡಿ ಹೊರ ಜಿಲ್ಲೆಯ ಆರೋಪಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬೀರನಹಳ್ಳಿ ಕಾವಲು ಗ್ರಾಮದ ಚಂದ್ರು ಹಾಗೂ ಸುರೇಶ್ ಎಂದು ಗುರುತಿಸಲಾಗಿದೆ.
ಆರೋಪಿಗಳು ಸಣ್ಣ ಗಾತ್ರದ ಮರಗಳನ್ನು ಕಡಿದು ಮೂಟೆಗಳಲ್ಲಿ ಸಾಗಿಸುತ್ತಿದ್ದರು. ಗಂಧದ ತುಂಡುಗಳನ್ನು ಬೆಮ್ಮತ್ತಿಯ ವ್ಯಕ್ತಿಯೋರ್ವನಿಗೆ ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿ ಪಡೆದ ಅರಣ್ಯ ಅಧಿಕಾರಿಗಳು ದಾಳಿ ಮಾಡಿ ಅರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಎಸಿಎಫ್ ಎ.ಎ.ಗೋಪಾಲ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರ್ಎಫ್ಒಗಳಾದ ಶೈಲೇಂದ್ರ ಕುಮಾರ್, ಪೂಜಶ್ರೀ, ಡಿಆರ್ಎಫ್ಗಳಾದ ಶ್ರವಣಕುಮಾರ್, ಸೂರ್ಯ, ಲೋಹಿತ್, ರೇಣುಕುಮಾರ್, ಸಿಬ್ಬಂದಿಗಳಾದ ಪ್ರವೀಣ್ ಕುಮಾರ್, ರಂಜಿತ್, ಸತೀಶ್, ದರ್ಶನ್, ರಾಕೇಶ್, ಪ್ರವೀಣ್, ಹರೀಶ್, ನಂದೀಶ್, ಸಂತೋಷ್ ಪಾಲ್ಗೊಂಡಿದ್ದರು.