ಕೊಚ್ಚಿ: ಮಾರಕ ಕೋವಿಡ್-19 ವೈರಸ್ ತೀವ್ರಗೊಳ್ಳುತ್ತಿದ್ದಂತೆಯೇ ಬಂದ್ ಮಾಡಿದ್ದ ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲವನ್ನು ಮತ್ತೆ ತೆರೆಯಲಾಗುತ್ತಿದೆ. ತಿಂಗಳ ಪೂಜೆ ಪ್ರಯುಕ್ತ ಜುಲೈ 17ನೇ ತಾರೀಕಿನಿಂದ 21 ರವರೆಗೂ ಅಯ್ಯಪ್ಪ ಸ್ವಾಮಿ ದೇಗುಲ ಓಪನ್ ಮಾಡಲಿದ್ದೇವೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಮಂಡಳಿ ಸದಸ್ಯರು, ಕೇವಲ ಐದು ದಿನಗಳ ಕಾಲ ಮಾತ್ರ ದೇಗುಲ ತೆಗೆಯಲಾಗುತ್ತಿದೆ. ಕೋವಿಡ್-19 ಪ್ರೋಟೋಕಾಲ್ ನಿಬಂಧನೆಗಳೊಂದಿಗೆ ದೇಗುಲ ಪ್ರವೇಶಕ್ಕೆ ಭಕ್ತರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದಿದ್ದಾರೆ.
ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಕೊರೊನಾ ಲಸಿಕೆ ಪಡೆದ ಪ್ರಮಾಣಪತ್ರ ಕಡ್ಡಾಯ. ಜತೆಗೆ 48 ಗಂಟೆಗಳ ಹಿಂದೆ ಪರೀಕ್ಷೆ ಮಾಡಿಸಿದ ಕೊರೊನಾ RTPCR ನೆಗೆಟಿವ್ ರಿಪೋರ್ಟ್ನೊಂದಿದೆ ಭಕ್ತರು ದೇಗುಲಕ್ಕೆ ಬರಬಹುದು ಎನ್ನಲಾಗಿದೆ.
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಆಗಮಿಸುವವರು ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡಬೇಕಾಗುತ್ತದೆ. ಮೊದಲ ಐದು ಸಾವಿರ ಭಕ್ತರಿಗೆ ಮಾತ್ರ ಅಯ್ಯಪ್ಪನ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ತಿಳಿಸಲಾಗಿದೆ.