ಮಂಗಳೂರು: ಕೊರೊನಾದಿಂದ ಮೃತರಾದವರ ಅಂತ್ಯಸಂಸ್ಕಾರ ಮಾಡಲು ಹಲವು ಸ್ವಯಂ ಸೇವಾ ಸಂಘಟನೆಗಳು ಮುಂದೆ ಬಂದಿದೆ. ವಾರಸುದಾರರಿಲ್ಲದ ಅನಾಥ ಶವಗಳಿಗೆ ಅಥವಾ ಮನೆಯವರೇ ಮುಂದೆ ಬರದ ಸೋಂಕಿತರ ಮೃತದೇಹಗಳಿಗೆ ಸಂಘ ಸಂಸ್ಥೆಗಳ ಕಾರ್ಯಕರ್ತರು ಅಂತ್ಯ ಸಂಸ್ಕಾರ ಮಾಡುತ್ತಿದ್ದಾರೆ.
ಆದರೆ ಸಮಾಜ ಸೇವೆ ಕಾರ್ಯದಲ್ಲೂ ಕೆಲವರು ಪ್ರಚಾರದ ಹುಚ್ಚಿನಿಂದ ಅಂತ್ಯಸಂಸ್ಕಾರ ಮಾಡುವ ಫೋಟೋ ಜೊತೆಗೆ ವಿವಿಧ ಬರಹಗಳನ್ನು ಬರೆದು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಾರೆ, ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿದ್ದಾರೆ.
ಇತ್ತೀಚೆಗೆ ಹಿಂದೂಗಳ ಮೃತದೇಹವನ್ನು ಮುಸಲ್ಮಾನರು ಅಂತ್ಯಸಂಸ್ಕಾರ ಮಾಡಿದರು ಎಂಬುವುದೇ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರವಾಗುತ್ತಿದೆ. ಇದನ್ನು ತಪ್ಪಿಸಲು ಮಂಗಳೂರಿನ ವಿಶ್ವ ಹಿಂದೂ ಪರಿಷದ್ ಕರಾವಳಿಯ ಎಲ್ಲಾ ಆಸ್ಪತ್ರೆಗಳಿಗೆ ಹಿಂದೂಗಳ ಶವವನ್ನು ಹಿಂದೂಗಳಿಗೆ ಮಾತ್ರ ಬಿಟ್ಟುಕೊಡಬೇಕೆಂದು ಒತ್ತಾಯ ಮಾಡಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ವಿಶ್ವ ಹಿಂದೂ ಪರಿಷದ್ ಮುಖಂಡ ಶರಣ್ ಪಂಪ್ವೆಲ್, ಉಡುಪಿ ಮತ್ತು ಮಂಗಳೂರಿನ ಆಸ್ಪತ್ರೆ ಗಳ ಆಡಳಿತ ಮಂಡಳಿಯವರು ಕೋವಿಡ್ನಿಂದ ಹಿಂದೂಗಳು ಮೃತರಾರದೆ ಅವರ ಶವಗಳನ್ನು ಹಿಂದೂಗಳಿಗೆ ಮಾತ್ರ ಬಿಟ್ಟುಕೊಡಬೇಕು. ಹಿಂದೂ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಮಾಡಲು ಹಿಂದೂ ಕಾರ್ಯಕರ್ತರ ಪಡೆ ಸಿದ್ಧವಿದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಕೆಲ ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು ಶವ ಸಂಸ್ಕಾರ ಮಾಡಿ ನಾಯಕರುಗಳ ಜೊತೆಗೆ ಪ್ರಚಾರ ಪಡೆಯುವ ಉದ್ದೇಶದಿಂದ ತಮ್ಮ ಸೇವೆಯನ್ನು ಮಾರಾಟ ಮಾಡುತ್ತಿದ್ದಾರೆ. ಇದರ ಅವಶ್ಯಕತೆ ಹಿಂದೂಗಳಿಗಿಲ್ಲ. ಹಿಂದೂಗಳ ಶವ ಅನಾಥವಾಗಲು ಯಾವತ್ತೂ ಸಾಧ್ಯವಿಲ್ಲ. ಈಗಾಗಲೇ ಭಜರಂಗದಳದ ತಂಡ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಕಾರ್ಯ ಮಾಡುತ್ತಿದ್ದು, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಮಾಡುತ್ತಿದೆ ಎಂದು ಶರಣ್ ಪಂಪ್ವೆಲ್ ತಿಳಿಸಿದ್ದಾರೆ.
ವಿಷಮ ಪರಿಸ್ಥಿತಿಯಲ್ಲೂ ಸೇವೆಯ ನೆಪದಲ್ಲಿ ಅಮಾಯಕ ಸೋಂಕಿತರ ಮೃತದೇಹದ ಜೊತೆಗೆ ಫೋಟೋ ತೆಗೆಯೋದನ್ನು ಸಂಘ ಸಂಸ್ಥೆಗಳು ಬಿಡಬೇಕಿದೆ. ಸೇವೆ ಮಾತಾಡಬೇಕೇ ಹೊರತು, ಸೇವೆ ಮಾರಾಟದ ಸರಕು ಆಗಬಾರದೆನ್ನುವುದೇ ಜನರ ಅಭಿಪ್ರಾಯವಾಗಿದೆ ಎಂದು ಪೋಸ್ಟ್ನಲ್ಲಿ ಬರೆದಿದ್ದಾರೆ.