ವಿಟ್ಲ: ದೇಶದ ಮಣ್ಣಿನ ಕಣದಲ್ಲಿರುವ ಭಾವನಾತ್ಮಕ ಮೌಲ್ಯಗಳನ್ನು ಎಲ್ಲ ಜೀವ ರಾಶಿಯಲ್ಲಿ ಕಾಣುವ ಕಾರ್ಯ ಪ್ರತಿಯೊಬ್ಬರಿಂದ ನಡೆಯಬೇಕು. ಗ್ರಾಮೀಣ ಪ್ರದೇಶದಲ್ಲಿ ಹಿಂದುಳಿದ ವರ್ಗದಲ್ಲಿ ಇರುವ ಪ್ರತಿಭೆಗಳನ್ನು ಗುರುತಿಸುವ ಕೆಲಸಗಳು ನಡೆಯಬೇಕು. ಎಂದು ಮಾಣಿಲ ಶ್ರೀಧಾಮ ಶ್ರೀಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಸೋಮವಾರ ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದಲ್ಲಿ ನಡೆದ ೨೧ನೇ ವರ್ಷದ ಶರನ್ನವ ರಾತ್ರಿ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ದೇಶದ ವ್ಯವಸ್ಥೆಯನ್ನು ಅವಲೋಕನ ಮಾಡುವ ಕಾರ್ಯವಾಗಬೇಕು. ಧಾರ್ಮಿಕ ವಿಚಾರಗಳನ್ನು ಸಮಾಜಕ್ಕೆ ಪಸರಿಸುವಲ್ಲಿ ಮಠಮಂದಿಗಳ ಪಾತ್ರ ದೊಡ್ಡದಿದೆ ಎಂದ ಅವರು ಕ್ಷೇತ್ರದಲ್ಲಿ ಇಪ್ಪತ್ತೈದು ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಬೆಳಿಗ್ಗೆ ಗಣಪತಿ ಹೋಮ, ಪಂಚಾಮೃತಾಭಿಷೇಕ. ಶರನ್ನವರಾತ್ರಿ ಪೂಜೆ, ಚಂಡಿಕಾಹೋಮ, ದತ್ತಯಾಗ, ಮಾಣಿಲ ಶ್ರೀಗಳಿಂದ ಮಧುಕರಿ ನಡೆಯಿತು. ಗ್ರಾಮೀಣ ಪ್ರತಿಭೆ ದೀಕ್ಷಾ ಅವರನ್ನು ಗೌರವಿಸಲಾಯಿತು.
ಧರ್ಮದರ್ಶಿ ದೇಜಪ್ಪ, ಮದ್ವಾಧೀಶ ವಿಠಲದಾಸ, ವಕೀಲ ಸುರೇಶ್ ನಾವೂರು, ಮಹಿಳಾ ಸಮಿತಿಯ ಅಧ್ಯಕ್ಷೆ ವನಿತಾ ವಿ. ಶೆಟ್ಟಿ ಶ್ರೀವಾಸುಕಿ ಸೇವಾಬಳಗದ ನಮಿತಾ, ಶ್ರೇಯಾ ಪ್ರಾರ್ಥಿಸುವರು. ಟ್ರಸ್ಟಿ ತಾರಾನಾಥ ಕೊಟ್ಟಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.