



ಶಿರೂರು ಭೂ ಕುಸಿತದ ಬಳಿಕ ಗಂಗಾವಳಿ ನದಿಯಾಳದಲ್ಲಿ ಬಿದ್ದ ಟ್ರಕ್ ಕೊನೆಗೂ ಪತ್ತೆಯಾಗಿದೆ. ಜುಲೈ 16 ರಂದು ಭೂ ಕುಸಿತ ಸಂಭವಿಸಿದ ಬಳಿಕ ಕೇರಳದ ಅರ್ಜುನ್ ಚಲಾಯಿಸುತ್ತಿದ್ದ ಟ್ರಕ್ ಗಂಗಾವಳಿ ನದಿಗೆ ಬಿದ್ದಿತ್ತು.ನದಿಯಲ್ಲಿ ನೀರಿನ ಪ್ರಮಾಣ ಜಾಸ್ತಿ ಇದ್ದ ಕಾರಣ ಟ್ರಕ್ ಪತ್ತೆ ಮಾಡಲು ಕಷ್ಟವಾಗಿತ್ತು. ಮುಳುಗು ತಜ್ಞ ಈಶ್ವರ ಮಲ್ಪೆ ಅವರು ಟ್ರಕ್ ಪತ್ತೆಗೆ ನಿರಂತರ ಪ್ರಯತ್ನ ನಡೆಸುತ್ತಿದ್ದರು.
ಅದರಲ್ಲಿ 8 ಜನರನ್ನು ಈಗಾಗಲೇ ಪತ್ತೆ ಮಾಡಿದ್ದು, ಇನ್ನುಳಿದ ಕೇರಳ ಮೂಲದ ಲಾರಿ ಚಾಲಕ ಅರ್ಜುನ್, ಶಿರೂರಿನ ಲೋಕೇಶ್ ನಾಯ್ಕ ಮತ್ತು ಜಗನ್ನಾಥ ನಾಯ್ಕ ಎಂಬುವವರಿಗಾಗಿ ಹುಡುಕಾಟ ನಡೆಸಲಾಗಿತ್ತು. ಇದೀಗ ಮೂರನೇ ಹಂತದ ಶೋಧ ಕಾರ್ಯಾಚರಣೆಯಲ್ಲಿ ನಾಪತ್ತೆಯಾಗಿದ್ದ ಲಾರಿ ಇಂದು ನಡೆಸಿದ 3ನೇ ಹಂತದ ಶೋಧ ಕಾರ್ಯಾಚರಣೆಯಲ್ಲಿ ಗಂಗಾವಳಿ ನದಿಯಲ್ಲಿ ಪತ್ತೆಯಾಗಿದೆ.
ಮುಳುಗು ತಜ್ಞ ಈಶ್ವರ ಮಲ್ಪೆ ಅವರು ಲಾರಿಗೆ ಹಗ್ಗ ಕಟ್ಟಿ ಮೇಲೆ ಎಳೆಯಲು ವ್ಯವಸ್ಥೆ ಮಾಡಿದ್ದು, ಲಾರಿ ಮೇಲೆತ್ತುವ ಕಾರ್ಯಾಚರಣೆಗೆ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ. ಇನ್ನು ಕಳೆದ ಆಗಸ್ಟ್ 13 ರಂದು ಕೇರಳ ಮೂಲದ ಚಾಲಕ ಅರ್ಜುನ್ ಓಡಿಸುತ್ತಿದ್ದ ಲಾರಿಯ ಜಾಕ್ ಗಂಗಾವಳಿ ನದಿಯಲ್ಲಿ ಸ್ಕೂಬಾ ಡೈವ್ ಕಾರ್ಯಾಚರಣೆ ವೇಳೆ ಪತ್ತೆಯಾಗಿತ್ತು.
ಸಿಕ್ಕಿರುವ ಜಾಕ್ ಅರ್ಜುನ್ ಓಡಿಸುತ್ತಿದ್ದ ಲಾರಿದೆ ಎಂದು ಲಾರಿ ಮಾಲಿಕ ಮುಫಿನ್ ಖಚಿತ ಪಡಿಸಿದ್ದರು. ಬಳಿಕ ಲಾರಿಯ ಎರಡು ಬಿಡಿ ಭಾಗಗಳಾದ ಲಾರಿ ಬಾಗಿಲಿನ ಕೀಲು ಕೂಡ ಪತ್ತೆಯಾಗಿತ್ತು. ಅದರಂತೆ ಇಂದು ಲಾರಿ ಸಿಕ್ಕಿದ್ದು, ಮೇಲೆತ್ತುವ ಕಾರ್ಯ ನಡೆಯುತ್ತಿದೆ.