ಬೆಂಗಳೂರು: ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರಾ ಹಾಗೂ ಕೊಲೆ ಪ್ರಕರಣ ರಾಜ್ಯದಲ್ಲಿ ಬಾರಿ ಸಂಚಲನ ಸೃಷ್ಟಿಸಿದೆ. ಇದೀಗ ವಿದ್ಯಾರ್ಥಿನಿ ಸೌಜನ್ಯಾಳ ಅತ್ಯಾಚಾರ ಮತ್ತು ಕೊಲೆ ಕೇಸ್ ಸಿನಿಮಾ ರೂಪದಲ್ಲಿ ಬರಲಿದೆ ಎಂಬ ಗಾಳಿ ಸುದ್ದಿಯೊಂದು ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಸೌಜನ್ಯ ಕೇಸ್ ಇಟ್ಟುಕೊಂಡು ಸಿನಿಮಾ ಮಾಡಲು ಲವ ಎನ್ನುವವರು ಹೊರಟಿದ್ದು, ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಟೈಟಲ್ ಗಾಗಿ ಅವರು ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಜಿ.ಕೆ. ವೆಂಚರ್ಸ್ ಬ್ಯಾನರ್ ಅಡಿಯಲ್ಲಿ ಟೈಟಲ್ ಗಾಗಿ ಅರ್ಜಿ ಸಲ್ಲಿಕೆಯಾಗಿದ್ದು, ‘ಸ್ಟೋರಿ ಆಫ್ ಸೌಜನ್ಯಾ’ ಶೀರ್ಷಿಕೆಯನ್ನು ಕೊಡುವಂತೆ ಅವರು ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ. ಇದೊಂದು ಸಾಮಾಜಿಕ ಚಿತ್ರವಾಗಲಿದೆ ಎಂದು ನಿರ್ದೇಶಕರು ಲವ ಹೇಳಿದ್ದಾರೆ.
2012ರ ಅ.9ರಂದು ಕಾಲೇಜಿಗೆ ತೆರಳಿದ್ದ ಸೌಜನ್ಯಾ ಮನೆಗೆ ಬಾರದೇ ಕಾಣೆಯಾಗಿದ್ದಳು. ಮನೆಯವರ ತೀವ್ರ ಹುಡುಕಾಟ ನಂತರ ಅ.10ರಂದು ಮನೆಗೆ ತೆರಳುವ ದಾರಿ ಮಧ್ಯೆ ಮಣ್ಣಸಂಕ ಎಂಬಲ್ಲಿ ಅರೆನಗ್ನ ಸ್ಥಿತಿಯಲ್ಲಿ ಸೌಜನ್ಯಾಳ ಶವ ಪತ್ತೆಯಾಗಿದ್ದು, ಅತ್ಯಾಚಾರ ನಡೆಸಿ ಕೊಲೆಗೈಯ್ಯಲಾಗಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಗಳು ತೀವ್ರಗೊಂಡ ಕೆಲವು ದಿನಗಳ ಬಳಿಕ ಸಂತೋಷ್ ರಾವ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಬರೋಬ್ಬರಿ 11 ವರ್ಷಗಳ ಬಳಿಕ ಬಂಧಿತನಾಗಿದ್ದ ಸಂತೋಷ್ ನಿರ್ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿತ್ತು.
ಈ ತೀರ್ಪಿನ ಬಳಿಕ ಸೌಜನ್ಯ ಪ್ರಕರಣ ಮತ್ತೆ ಭುಗಿಲೆದ್ದಿದೆ. ನ್ಯಾಯಕ್ಕಾಗಿ ಸೌಜನ್ಯ ಪೋಷಕರು ಹಾಗೂ ಕೆಲ ಸಂಘಟನೆಗಳು ಹೋರಾಟ ನಡೆಸುತ್ತಿದೆ. ಇತ್ತ ಪೋಷಕರು ಹಾಗೂ ಸಂಘಟನೆಗಳು ನೇರವಾಗಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕುಟುಂಬಸ್ಥರು ಹಾಗೂ ಇತರ ಕೆಲವರ ಮೇಲೆ ಮಾಡಿರುವ ಆರೋಪವನ್ನು ಮತ್ತಷ್ಟು ಗಂಭೀರಗೊಳಿಸಿದ್ದಾರೆ. ಈ ಬೆಳವಣಿಗೆ ನಡುವೆ ಇದೀಗ ಇದೇ ಸೌಜನ್ಯ ಪ್ರಕರಣ ಸಿನಿಮಾ ಆಗುತ್ತಿದೆ. ಬೆಂಗಳೂರಿನ ಫಿಲ್ಮ್ ಚೇಂಬರ್ನಲ್ಲಿ ಸೌಜನ್ಯ ಚಿತ್ರದ ಹೆಸರು ನೊಂದಣಿಯಾಗಿದೆ.