




ಕಾರವಾರ: ಪ್ರವಾಸಕ್ಕೆಂದು ತೆರಳಿದ್ದ ವಿದ್ಯಾರ್ಥಿ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಕಡಲ ತೀರದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಬೆಂಗಳೂರಿನ ವಿದ್ಯಾಸೌಧ ಪಿ.ಯು ಕಾಲೇಜಿನ ಗೌತಮ್ (17) ಹಾಗೂ ರಕ್ಷಣೆಗೊಳಗಾದ ವಿದ್ಯಾರ್ಥಿಯನ್ನು ಧನುಷ್ .ಡಿ ಎಂದು ಗುರುತಿಸಲಾಗಿದೆ.
ಬೆಂಗಳೂರಿನ ವಿದ್ಯಾಸೌಧ ಪಿ.ಯು ಕಾಲೇಜಿನ 220 ವಿದ್ಯಾರ್ಥಿಗಳು ಪ್ರವಾಸಕ್ಕೆಂದು ತೆರಳಿದ್ದರು. ಮುರುಡೇಶ್ವರದಲ್ಲಿ ಸಮುದ್ರಕ್ಕೆ ತೆರಳಿದ್ದ ವೇಳೆ ಇಬ್ಬರು ವಿದ್ಯಾರ್ಥಿಗಳು ಸಮುದ್ರದ ಆಳದಲ್ಲಿ ಈಜಲು ಹೋಗಿದ್ದರು. ಅಲೆಗಳ ಅಬ್ಬರಕ್ಕೆ ಗೌತಮ್ ನೀರಿನಲ್ಲಿ ಮುಳುಗಿದ್ದು, ಇನ್ನೊಬ್ಬ ವಿದ್ಯಾರ್ಥಿಯನ್ನು ನೋಡಿದ ಲೈಫ್ ಗಾರ್ಡ್ ಹಾಗೂ ಪೊಲೀಸರು ರಕ್ಷಣೆ ಮಾಡಿದ್ದಾರೆ. ಆದರೆ ಗೌತಮ್ ಕೂಡ ಈಜಲು ಬಂದಿದ್ದ ಎನ್ನುವ ವಿಷಯವನ್ನು ಧನುಷ್ ಹೇಳಲಿಲ್ಲ.
ವಿದ್ಯಾರ್ಥಿಗಳ ಸಂಖ್ಯೆ ಎಣಿಸಿದಾಗ ಗೌತಮ್ ಕೂಡ ಸಮುದ್ರದಲ್ಲಿ ಈಜಲು ಹೋಗಿರುವುದು ಗಮನಕ್ಕೆ ಬಂದಿದೆ. ಬಳಿಕ ಮುರುಡೇಶ್ವರ ಎಸ್ಐ ರುದ್ರೇಶ್, ಲೈಪ್ ಗಾರ್ಡ್ ಹಾಗೂ ಓಷಿಯನ್ ಅಡ್ವೆಂಚರ್ಸ್ ತಂಡದಿಂದ ಶೋಧ ನಡೆಸಲಾಯಿತು. ಆತನ ಶವವನ್ನು ಹೊರತೆಗೆಯಲಾಗಿದ್ದು, ಸಾವಿನಿಂದ ಪಾರು ಮಾಡಲಾಗಲಿಲ್ಲ. ರಕ್ಷಣೆಗೊಳಗಾದ ಧನುಷ್ RNS ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸುರಕ್ಷಿತವಾಗಿದ್ದಾನೆ. ಈ ಬಗ್ಗೆ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.