ಬೆಂಗಳೂರು : ರೆಮಿಡೆಸಿವಿರ್ ಹಂಚಿಕೆಯಲ್ಲಿ ಪಾರದರ್ಶಕತೆ ತರಲು ಮತ್ತು ಕಾಳಸಂತೆಯಲ್ಲಿ ಮಾರಾಟ ತಡೆಯಲು ರಾಜ್ಯ ಸರ್ಕಾರ ಹೊಸ ವ್ಯವಸ್ಥೆ ಮಾಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ರೆಮ್ ಡೆಸಿವಿರ್ ಹಂಚಿಕೆಯಲ್ಲಿ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ರೂಪಿಸಲಾಗಿದ್ದು ಸೋಂಕಿತ ವ್ಯಕ್ತಿಯ ಹೆಸರಿನಲ್ಲಿ ಯಾವ ಆಸ್ಪತ್ರೆಗೆ ಔಷಧ ಹಂಚಿಕೆ ಮಾಡಲಾಗಿದೆ ಎಂದು ಎಸ್.ಎಂ.ಎಸ್ ಕಳುಹಿಸಲಾಗುತ್ತದೆ ಎಂದಿದ್ದಾರೆ.

ಟ್ವೀಟ್ ಮೂಲಕ ಈ ಮಾಹಿತಿ ನೀಡಿರುವ ಸಚಿವರು, ಸಾರ್ವಜನಿಕರು //covidwar.karnataka.gov.in/service2 ಈ ಲಿಂಕ್ ಮೂಲಕ ತಮಗೆ ಹಂಚಿಕೆಯಾಗಿರುವ ಔಷಧದ ಬಗ್ಗೆ ಮಾಹಿತಿ ಪಡೆಯಬಹುದು ಎಂದಿದ್ದಾರೆ.

ಒಂದು ವೇಳೆ ಸೋಂಕಿತ ವ್ಯಕ್ತಿಯ SRF IDಗೆ ರೆಮಿಡಿಸಿವಿರ್ ಔಷಧ ಹಂಚಿಕೆಯಾಗಿ ಆಸ್ಪತ್ರೆ ಅದನ್ನು ಆ ವ್ಯಕ್ತಿಯ ಚಿಕಿತ್ಸೆಗೆ ಒದಗಿಸದಿದ್ದಲ್ಲಿ ಇದೇ ಲಿಂಕ್ ಮೂಲಕ ಸರ್ಕಾರಕ್ಕೆ ವರದಿ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಪಾರದರ್ಶಕ ವ್ಯವಸ್ಥೆಯಿಂದ ಕಾಳಸಂತೆ ಮಾರಾಟಕ್ಕೆ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕೋಣ ಎಂದು ಸಚಿವ ಸುಧಾಕರ್ ಮನವಿ ಮಾಡಿದ್ದಾರೆ.










