ನವದೆಹಲಿ: ದೇಶದಲ್ಲಿ ಸದ್ಯ ಅತಿದೊಡ್ಡ ಸವಾಲಾಗಿ ಕಾಡುತ್ತಿರುವುದು ವೈದ್ಯಕೀಯ ಆಕ್ಸಿಜನ್ ಕೊರತೆ. ಹಲವು ರಾಜ್ಯಗಳ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕವಿಲ್ಲ ಎಂಬ ಕೂಗು ಕೇಳಿಬರುತ್ತಿದ್ದು, ಅದರ ಪೂರೈಕೆಗೆ ಕೇಂದ್ರ ಸರ್ಕಾರವೂ ಸಹ ಕ್ರಮ ಕೈಗೊಳ್ಳುತ್ತಿದೆ.
ಅಗತ್ಯ ಇರುವ ರಾಜ್ಯಗಳಿಗೆ ಆಕ್ಸಿಜನ್ ಕಳಿಸುವ ವ್ಯವಸ್ಥೆ ಮಾಡುತ್ತಿದೆ. ಕೊರೊನಾ ವಿರುದ್ಧ ಹೋರಾಟದಲ್ಲಿ ಎದುರಾಗಿರುವ ಆಕ್ಸಿಜನ್ ಸಮಸ್ಯೆಯನ್ನು ನೀಗಿಸಲು ಇದೀಗ ಟಾಟಾ ಗ್ರೂಪ್ ಕೇಂದ್ರ ಸರ್ಕಾರಕ್ಕೆ ಸಹಾಯ ಮಾಡಲು ನಿರ್ಧರಿಸಿದೆ.
ಭಾರತದಾದ್ಯಂತ ಹಲವು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಮಸ್ಯೆ ಎದುರಾಗಿದೆ. ಸಾಗಣೆ ಇನ್ನಷ್ಟು ತ್ವರಿತವಾಗಿ ಆಗುವ ಅಗತ್ಯತೆ ಇದೆ. ಈ ಸವಾಲಿನ ವಿರುದ್ಧ ಕೇಂದ್ರ ಸರ್ಕಾರ ಹೋರಾಡುತ್ತಿದ್ದು, ಅದಕ್ಕೆ ನೆರವು ನೀಡುವ ಸಲುವಾಗಿ 24 ಕ್ರಯೋಜೆನಿಕ್ ಕಂಟೇನರ್ಗಳನ್ನು ಆಮದು ಮಾಡಿಕೊಳ್ಳುತ್ತಿರುವುದಾಗಿ ಟಾಟಾ ಗ್ರೂಪ್ ತಿಳಿಸಿದೆ.
ಅಷ್ಟೇ ಅಲ್ಲದೆ ಕೊವಿಡ್ 19 ವಿರುದ್ಧ ಹೋರಾಟಕ್ಕೆ, ಆಮ್ಲಜನಕ ಕೊರತೆ ನೀಗಿಸಲು ನಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡುತ್ತೇವೆ ಎಂದೂ ಟಾಟಾ ಗ್ರೂಪ್ ಹೇಳಿದೆ. ಈ ಕ್ರಯೋಜೆನಿಕ್ ಕಂಟೇನರ್ಗಳು ದ್ರವರೂಪದ ಆಮ್ಲಜನಕ ಸಾಗಣೆಗೆ ಸಹಾಯ ಮಾಡಲಿವೆ.
ಟಾಟಾ ಗ್ರೂಪ್ನ ಈ ನೆರವನ್ನು ಪ್ರಧಾನಿ ನರೇಂದ್ರ ಮೋದಿಯವರು ಸ್ವಾಗತಿಸಿದ್ದಾರೆ ಮತ್ತು ಶ್ಲಾಘಿಸಿದ್ದಾರೆ. ಇದು ನಿಜಕ್ಕೂ ಸಹಾನುಭೂತಿ. ಭಾರತದ ಜನರು ಒಗ್ಗಟ್ಟಾಗಿ ಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಕಳೆದ ವರ್ಷವೂ ರತನ್ ಟಾಟಾ ಅವರ ಟಾಟಾ ಟ್ರಸ್ಟ್ನಿಂದ ಕೊರೊನಾ ವಿರುದ್ಧ ಹೋರಾಟಕ್ಕೆ 500 ಕೋಟಿ ರೂ.ನೀಡಲಾಗಿತ್ತು. ಹಾಗೇ ಟಾಟಾ ಸನ್ಸ್ ವತಿಯಿಂದ 1000 ಕೋಟಿ ರೂ. ನೀಡಲಾಗಿತ್ತು. ಈ ಬಾರಿಯೂ ಟಾಟಾ ಗ್ರೂಪ್ ತನ್ನ ಬದ್ಧತೆ ತೋರಿಸಿದೆ. ದೇಶಕ್ಕೆ ಆಪತ್ತು ಬಂದಾಗ ಅದರ ವಿರುದ್ಧ ಹೋರಾಟದಲ್ಲಿ ನಾವಿದ್ದೇವೆ ಎಂಬುದನ್ನು ಮತ್ತೊಮ್ಮೆ ತೋರಿಸಿದೆ.