ಕಾಸರಗೋಡು : ಸರ್ವಿಸ್ ರಸ್ತೆ ಬಿಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾತ್ರ ಸಂಚರಿಸುತ್ತಿದ್ದ ಕರ್ನಾಟಕ ಸಾರಿಗೆ ಬಸ್ಗೆ, 500 ಮೀ. ಹಿಮ್ಮುಖವಾಗಿ ಚಲಿಸಿ ಸರ್ವಿಸ್ ರಸ್ತೆಯ ಮೂಲಕ ಸಂಚರಿಸುವಂತೆ ಮಾಡಿದ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಕುಂಜತ್ತೂರು ಬಳಿ ವರದಿಯಾಗಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಂಗಳೂರಿನಿಂದ ಕೇರಳದ ಕಾಸರಗೋಡಿಗೆ ತೆರಳುತ್ತಿದ್ದ ಕರ್ನಾಟಕ ಸಾರಿಗೆ ಬಸ್, ಪ್ರತೀ ದಿನ ಸರ್ವಿಸ್ ರಸ್ತೆ ಬಿಟ್ಟು ರಾಷ್ಟ್ರೀಯ ಹೆದ್ದಾರಿ ಮುಖಾಂತರ ತೆರಳುತ್ತಿತ್ತು. ಇದು ಪ್ರಯಾಣಿಕರಿಗೆ ತಮಗೆ ಇಳಿಯ ಬೇಕಿದ್ದ ನಿಲ್ದಾಣಗಳಿಂದ ದೂರದಲ್ಲಿ ನಿಲ್ಲುತ್ತಿದ್ದರಿಂದ ತೊಂದರೆಯಾಗುತ್ತಿತ್ತು. ಸಾಕಷ್ಟು ಬಾರೀ ಸರ್ವಿಸ್ ರಸ್ತೆಯಲ್ಲೇ ಸಂಚರಿಸಿ ಎಂದು ಪ್ರಯಾಣಿಕರು ಮನವಿಮಾಡಿದ್ದರೂ ತಲೆಕೆಡಿಸಿಕೊಳ್ಳದ ಚಾಲಕ ರಾಷ್ಟ್ರೀಯ ಹೆದ್ದಾರಿಯ ಮೂಲಕವೇ ಸಂಚರಿಸುತ್ತಿದ್ದರು. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿತ್ತು.
ಈ ಬಗ್ಗೆ, ಹಸೈನಾರ್ ಎಂಬವರು ಬಸ್ ನಿರ್ವಾಹಕರ ಗಮನಕ್ಕೆ ತಂದಿದ್ದರು. ಆದರೆ ಅವರ ಮನವಿಗೂ ಕ್ಯಾರೇ ಎನ್ನದೇ, ಬಸ್ಸಿನ ಸಿಬ್ಬಂದಿ ಹಳೇ ಚಾಳಿ ಮುಂದುವರಿಸಿದ್ದರು. ಕೆಲ ದಿನಗಳ ಹಿಂದೆ ಹಸೈನಾರ್ ಅವರು ಸಿನಿಮೀಯ ರೀತಿಯಲ್ಲಿ ರಸ್ತೆಯಲ್ಲಿ ಕುರ್ಚಿ ಹಾಕಿ ಕುಳಿತು ಬಸ್ಸನ್ನು ತಡೆದಿದ್ದಾರೆ. ಸಿಬ್ಬಂದಿಯೊಂದಿಗೆ ಏನೂ ಮಾತನಾಡದೇ ತನ್ನಷ್ಟಕ್ಕೇ ಸುಮ್ಮನೇ ಕುಳಿತಿದ್ದಾರೆ. ಇದರಿಂದ ಮುಜುಗರಕ್ಕೊಳಗಾದ ಬಸ್ ಚಾಲಕ ಬೇರೆ
ದಾರಿಯಿಲ್ಲದೇ 500 ಮೀ. ಹಿಮ್ಮುಖವಾಗಿ ಚಲಿಸಿ, ಸರ್ವಿಸ್ ರಸ್ತೆಗೆ ತೆರಳಿದ್ದಾರೆ. ಈ ಎಲ್ಲಾ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದ್ದು ವೀಡಿಯೋ ವೈರಲಾಗಿದೆ. ಹಸೈನಾರ್ ಅವರ ನಡೆಗೆ ಮೆಚ್ಚುಗೆ ಸಿಕ್ಕಿದೆ!