


ಬೆಳ್ತಂಗಡಿ : ಇಂದಬೆಟ್ಟು ಗ್ರಾಮದ ಬಂಗಾಡಿಯಲ್ಲಿ ಮನೆಯಿಂದ ಅಂಗಡಿಗೆಂದು ಹೋಗಿ ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಇಂದು ನದಿಯಲ್ಲಿ ಪತ್ತೆಯಾಗಿದೆ.
ಬೆದ್ರಬಟ್ಟು ನಿವಾಸಿ ಬಾಬು ಮಡಿವಾಳ ಎಂಬವರ ಪತ್ನಿ ಮೋಹಿನಿ(60) ಎಂಬವರು ಮೃತ ಮಹಿಳೆ.
ಭಾನುವಾರ ಸಂಜೆ ಕೂಲಿ ಕೆಲಸ ಮುಗಿಸಿ ಅಂಗಡಿಗೆ ಹೋದವರು ಮನೆಗೆ ಹಿಂತಿರುಗಿರಲಿಲ್ಲ ಈ ಹಿನ್ನಲೆಯಲ್ಲಿ ಮನೆಯವರು ಹುಡುಕಾಡಿದ್ದು ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಸೋಮವಾರ ಬಂಗಾಡಿ ಸಹಸ್ರ ನಾಗಬನ ದೇವಸ್ಥಾನ ಬಳಿ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.
ಮೋಹಿನಿ ಅವರು ಅಂಗಡಿಗೆ ಹೋಗುವ ದಾರಿ ಮಧ್ಯೆ ಬೆದ್ರಬೆಟ್ಟು ಬಳಿ ಹೊಳೆ ದಾಟಿ ಹೋಗಬೇಕಾಗಿದ್ದು , ದಾಟುವಾಗ ಇವರು ನೀರಿಗೆ ಬಿದ್ದಿರಬಹುದೆಂದು ಶಂಕಿಸಲಾಗಿದೆ. ಎರಡು ಕಿ.ಮೀ ದೂರದವರೆಗೆ ಕೊಚ್ಚಿಕೊಂಡು ಹೋಗಿ ಸಹಶ್ರನಾಗಬನ ಬಳಿ ಮೃತದೇಹ ಸಿಲುಕಿಕೊಂಡಿತ್ತು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸಹಕಾರದೊಂದಿಗೆ ಮೃತದೇಹವನ್ನು ನದಿಯಿಂದ ಮೇಲೆತ್ತಲಾಯಿತ್ತು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.