

ಬೆಳ್ತಂಗಡಿ : ಪಿಕಪ್ ವಾಹನದಲ್ಲಿ ಅಕ್ರಮ ಮರಳು ಸಾಗಾಟ ಮಾಡುವಾಗ ಪತ್ತೆ ಹಚ್ಚಿದ ಧರ್ಮಸ್ಥಳ ಪೊಲೀಸರು ಚಾಲಕ ಸಹಿತ ಪಿಕಪ್ ವಾಹನ ವಶಪಡಿಸಿಕೊಂಡ ಘಟನೆ ಬೆಳ್ತಂಗಡಿ ತಾಲೂಕು ಬೆಳಾಲು ಗ್ರಾಮದ ಕೀನ್ಯಾಜೆ ಎಂಬಲ್ಲಿ ನಡೆದಿದೆ.
ಬಂಧಿತ ಪಿಕಪ್ ಚಾಲಕನನ್ನು ಹರೀಶ ಎಂದು ಗುರುತಿಸಲಾಗಿದೆ.
ಧರ್ಮಸ್ಥಳ ಪೊಲೀಸ್ ಠಾಣಾ ಪಿಎಸ್ಐ ಅನಿಲ್ ಕುಮಾರ್ ಡಿ ಅವರ ನೇತೃತ್ವದ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಪೊಲೀಸರು ವಾಹನ ಪರಿಶೀಲಿಸಿದಾಗ ಮರಳನ್ನು ತುಂಬಿಸಿರುವುದು ಕಂಡು ಬಂದಿದ್ದು , ವಾಹನ ಚಾಲಕನಾದ ಹರೀಶ್ ಎಂಬಾತನನ್ನು ವಿಚಾರಿಸಲಾಗಿ, ಸಂಬಂದಪಟ್ಟ ಇಲಾಖೆಯಿಂದ ಯಾವುದೇ ಅನುಮತಿಯನ್ನು ಪಡೆಯದೇ ಸರಕಾರಕ್ಕೆ ಯಾವುದೇ ತೆರಿಗೆಯನ್ನು ಪಾವತಿಸದೇ, ಅನಧಿಕೃತವಾಗಿ ನದಿಯಿಂದ ಅಕ್ರಮವಾಗಿ ಮರಳನ್ನು ಕಳವು ಮಾಡಿಕೊಂಡು ಹೋಗುತ್ತಿರುವುದು ಕಂಡು ಬಂದ ಹಿನ್ನಲೆಯಲ್ಲಿ ಆರೋಪಿ ಚಾಲಕ ಸಹಿತ ಪಿಕಪ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 06/2024 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.