ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಿ ಸುಸ್ತಾಗುತ್ತಿದೆ ಎಂದು ಮುಖ್ಯ ಶಿಕ್ಷಕರ ಕೊಠಡಿಗೆ ಬಂದು ಕುರ್ಚಿಯಲ್ಲಿ ಕುಳಿತಲ್ಲಿಯೇ ಹೃದಯಾಘಾತವಾಗಿ ಪ್ರಾಣ ಬಿಟ್ಟಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ಹೃದಯಘಾತದಿಂದ ಮೃತಪಟ್ಟ ಪ್ರಭಾರ ಮುಖ್ಯ ಶಿಕ್ಷಕ ಸುರೇಶ (57) ಎಂದು ಗುರುತಿಸಲಾಗಿದೆ.
ಮೃತ ಶಿಕ್ಷಕ ಸುರೇಶ್ ಮೂಲತಃ ರಾಣೆಬೆನ್ನೂರಿನವರು. ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಪ್ರಭಾರ ಮುಖ್ಯ ಶಿಕ್ಷಕನಿಗೆ ಹೃದಯಘಾತ ಸಂಭವಿಸಿದ್ದು, ಕುಳಿತುಕೊಂಡ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಗದ್ರಟಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದೆ. ಮೊದಲ ತರಗತಿ ಪಾಠ ಮುಗಿಸಿ, ಇಂದು ಯಾಕೋ ತುಂಬಾ ಸುಸ್ತಾಗುತ್ತಿದೆ ಎಂದು ವಿದ್ಯಾರ್ಥಿಗಳಿಗೆ ಹೇಳಿ ಮುಖ್ಯ ಶಿಕ್ಷಕರ ಕೋಣೆಯತ್ತ ಬಂದು ತಮ್ಮ ಕುರ್ಚಿಯಲ್ಲಿ ಕುಳಿತುಕೊಂಡಿದ್ದಾರೆ. ಎದೆಯ ನೋವು ಕಾಣಿಸಿಕೊಂಡರೂ ಅದನ್ನು ನಿರ್ಲಕ್ಷ್ಯ ಮಾಡಿ, ಇತರೆ ದಾಖಲೆಗಳನ್ನು ಬರೆದಿಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಶಾಲೆಗೆ ಸಂಬಂಧಿಸಿದ ದಾಖಲೆ ಬರೆಯುವ ವೇಳೆ ಹೃದಯಘಾತ ಸಂಭವಿಸಿದೆ. ಸುರೇಶ್ ನಿಧನದಿಂದ ಶಾಲೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು.