ತಿಪಟೂರು: ತುಮಕೂರು ಜಿಲ್ಲೆ ತಿಪಟೂರು ನಗರದ ಅಯ್ಯನ ಬಾವಿಯಲ್ಲಿ ತಂದೆಯಾದ ಖುಷಿಯಲ್ಲಿರಬೇಕಿದ್ದ ಯುವಕನೊಬ್ಬ ಸಂಬಂಧಿಕರ ಮಾತಿಗೆ ಮನನೊಂದು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಸಂಭವಿಸಿದೆ.
ಮೃತ ದುರ್ದೈವಿಯನ್ನು ಅಯ್ಯನಬಾವಿಯ ಎಸ್.ನಾಗರಾಜು (26)ಎಂದು ಗುರುತಿಸಲಾಗಿದೆ. ಈತ ಅರಸೀಕೆರೆ ತಾಲೂಕು ಚಿಂದೇನಹಳ್ಳಿ ಗಡಿ ಸಮೀಪದ ಸೋಮೇನಹಳ್ಳಿಯ ಬೇಬಿಕಲಾ ಎಂಬಾಕೆಯನ್ನು ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿದ್ದನು. ಈ ದಂಪತಿಗೆ ಮೂರು ದಿನದ ಹಿಂದಷ್ಟೇ ಗಂಡು ಮಗು ಕೂಡ ಜನಿಸಿದೆ. ಆದರೆ ಹೆರಿಗೆ ವೇಳೆ ಪತ್ನಿ ತೆಗೆದುಕೊಂಡ ನಿರ್ಧಾರಕ್ಕೆ ಗಂಡ ನಾಗರಾಜುಗೆ ಒಂದಿಷ್ಟು ಒಪ್ಪಿಗೆಯಾಗಿಲ್ಲ. ಇದೇ ವಿಚಾರಕ್ಕೆ ಸಂಬಂಧಿಸಿ ಪತ್ನಿಯ ಕುಟುಂಬಸ್ಥರ ಬಳಿಯೂ ಆತ ಗಲಾಟೆ ಮಾಡಿಕೊಂಡಿದ್ದು, ಇದಾದ ಮೂರು ದಿನಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿದುಬಂದಿದೆ.
ನಾಗರಾಜುವಿನ ಪತ್ನಿ ಬೇಬಿಕಲಾ ಅವರನ್ನು ಮೂರು ದಿನದ ಹಿಂದೆ ಹೆರಿಗೆಗಾಗಿ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ, ಆ ವೇಳೆ ಮಕ್ಕಳಾಗದಂತೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ವಿಚಾರ ತಿಳಿಯುತ್ತಿದ್ದಂತೆ ಕುಪಿತಗೊಂಡ ನಾಗರಾಜು, ನನ್ನನ್ನೂ ಕೇಳದೆ ಪತ್ನಿಗೆ ಶಸ್ತ್ರಚಿಕಿತ್ಸೆ ಮಾಡಿಸಿದ ವಿಚಾರವಾಗಿ ಸಂಬಂಧಿಕರ ಜತೆ ಗಲಾಟೆ ಮಾಡಿದ್ದನು. ಈ ವೇಳೆ ನಾಗರಾಜು ವಿರುದ್ಧ ಪೊಲೀಸ್ ಠಾಣೆಗೆ ದೂರು ಕೊಡುವುದಾಗಿ ಸಂಬಂಧಿಕರು ಬೆದರಿಸಿದ್ದರು. ಇದೇ ವಿಚಾರವಾಗಿ ಮನನೊಂದಿದ್ದ ನಾಗರಾಜು ಸೋಮವಾರ ಬೆಳಗ್ಗೆ 7.30ರ ಸುಮಾರಿಗೆ ಅಯ್ಯನಬಾವಿ ಸಮೀಪ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಅರಸೀಕೆರೆ ರೈಲ್ವೆ ಪೊಲೀಸರು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿಸಿ, ಸಂಬಂಧಿಕರಿಗೆ ಶವ ಹಸ್ತಾಂತರಿಸಿದ್ದಾರೆ.