


ಮಂಗಳೂರು: ಸೂಕ್ತ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ 1.32 ಲಕ್ಷ ರೂ. ನಗದನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತೋಡಾರ್-ಎಡಪದವು ಚೆಕ್ಪೋಸ್ಟ್ನಲ್ಲಿ ನಡೆದಿದೆ.
ದೇಶಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಚೆಕ್ಪೋಸ್ಟ್ನಲ್ಲಿ ಚುನಾವಣಾಧಿಕಾರಿಗಳ ತಂಡ ವಾಹನಗಳ ತಪಾಸಣೆ ನಡೆಸುತ್ತಿದ್ದು, ರಾತ್ರಿ 11ರ ಸುಮಾರಿಗೆ ಕೈಕಂಬ ನಿವಾಸಿಯೊಬ್ಬರು ಕಾರಿನಲ್ಲಿ ಆಗಮಿಸಿದಾಗ ಅಧಿಕಾರಿಗಳು ವಾಹನ ಪರಿಶೀಲನೆ ನಡೆಸಿದ್ದಾರೆ. ಕಾರಿನಲ್ಲಿದ್ದ 1.32 ಲಕ್ಷ ರೂ.ಗಳಿಗೆ ದಾಖಲೆ ನೀಡಲು ವಿಫಲವಾದ ಕಾರಣ ಆ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತಂತೆ ಸೋಮವಾರ ಬಗ್ಗೆ ಸುದ್ದಿಗಾರರ ಜತೆಗೆ ಮಾತನಾಡಿದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಹಾಯಕ ಚುನಾವಣಾಧಿಕಾರಿ ಕೆ.ಜಾನ್ಸನ್ ಅವರು ‘ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ 50 ಸಾವಿರ ರೂ.ಗಳಿಗಿಂತ ಹೆಚ್ಚು ಹಣ ಸಾಗಿಸುವಂತಿಲ್ಲ. ಹೆಚ್ಚು ಹಣ ಸಾಗಿಸುವಾಗ ಸರಿಯಾದ ದಾಖಲೆ ಒದಗಿಸಬೇಕು. 50 ಸಾವಿರಕ್ಕಿಂತ ಹೆಚ್ಚು ಹಣ ಸಾಗಿಸಿದಾಗ ದಾಖಲೆ ನೀಡದಿದ್ದರೆ ಅದನ್ನು ವಶಕ್ಕೆ ಪಡೆಯಲಾಗುತ್ತದೆ. ಸಂಬಂಧಪಟ್ಟವರು ದಾಖಲೆಯನ್ನು ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯವರ ಅಪೀಲು ಕಮಿಟಿಗೆ ಮನವಿ ಸಲ್ಲಿಸಿ ಹಣ ವಾಪಾಸ್ ಪಡೆಯಲೂ ಅವಕಾಶ ಇದೆ ಎಂದರು.