ಮಂಗಳೂರು: ಹಿರಿಯ ತುಳು ಸಂಘಟಕ,ಲೇಖಕ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಶಿವಾನಂದ ಕರ್ಕೇರ (73) ಬುಧವಾರ ಸಂಜೆ ನಿಧನರಾಗಿದ್ದಾರೆ.
ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯಾಗಿ ಹಲವಾರು ವರ್ಷಗಳ ಕಾಲ ದೆಹಲಿಯಲ್ಲಿ ಸೇವೆ ಸಲ್ಲಿಸಿರುವ ಅವರು, ಬಳಿಕ ಮಂಗಳೂರಿನಲ್ಲಿಯೂ ಸೇವೆ ಸಲ್ಲಿಸಿದ್ದರು. ಸುಮಾರು 35 ವರ್ಷಗಳ ಕಾಲ ಸಿಂಡಿಕೇಟ್ ಬ್ಯಾಂಕ್ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಖ್ಯಾತ ಎರು ಮೈಂದೆ ನಾಟಕದ ರಚನೆಕಾರರಾಗಿದ್ದ ಇವರು ಅನೇಕ ವರ್ಷಗಳಿಂದ ತುಳು ಭಾಷೆಗಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಮಾರು 17 ಕ್ಕೂ ಹೆಚ್ಚು ನಾಟಕ ಕೃತಿಗಳ ರಚನೆ ಮಾಡಿದ್ದರು. ಕಾಲಚಕ್ರ, ಭೂಭಾರ ಸಮಿತಿ, ಕಂಡನಿ ಬೊಡ್ಚಂದಿನ ಸಂಘ, ಆವಾ ಈ ಮದಿಮೆ, ಕಾರ್ನಿಕದ ದೈವ ವೈದ್ಯನಾಥೆ ಮುಂತಾದವು ಶಿವಾನಂದ ಕರ್ಕೇರರ ಪ್ರಸಿದ್ಧ ನಾಟಕಗಳು.
ಸಿಂಡಿಕೇಟ್ ಬ್ಯಾಂಕಿನ ಮಾಜಿ ಅಧಿಕಾರಿಯಾಗಿದ್ದ ಇವರು ಮಂಗಳೂರು ವಿವಿಯಲ್ಲಿ ಇತ್ತೀಚೆಗೆ ಆರಂಭವಾದ ತುಳು ಎಂ.ಎ. ಮೊದಲ ಬ್ಯಾಚ್ನ ವಿದ್ಯಾರ್ಥಿಯಾಗಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.