ಮಂಗಳೂರು: ಸೂರ್ಯ ಎನ್.ಕೆ. ಸಾಮಾಜಿಕ ಜಾಲತಾಣದಲ್ಲಿ ತುಳುನಾಡಿನ ಬಾವುಟವನ್ನು ಚಪ್ಪಲಿಗೆ ಎಡಿಟ್ ಮಾಡಿ ಅಶ್ಲೀಲ ಬರಹಗಳ ಮೂಲಕ ಕಾಮೆಂಟ್ ಹಾಕಿ ತುಳುವರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ ವ್ಯಕ್ತಿಯನ್ನು ಮಂಗಳೂರು ಪೊಲೀಸರು ಬಂಧಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಮಂಗಳೂರು ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ಜಾಡು ಹತ್ತಿ ಹೋದ ಪೋಲಿಸರು ತುಳುವರ ಭಾವನೆಗೆ ಧಕ್ಕೆ ತಂದ ಆರೋಪದ ಮೇರೆಗೆ ಆರೋಪಿಯನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ತುಳುನಾಡ ಬಾವುಟವನ್ನು ಚಪ್ಪಲಿ ಬಣ್ಣಕ್ಕೆ ಹೊಂದಿಕೆಯಾಗುವಂತೆ ಎಡಿಟ್ ಮಾಡಿ, ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಲಾಗಿತ್ತು.ಈ ಕುಕೃತ್ಯ ನಡೆಸಿದವನನ್ನುಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿರುವ ಸೂರ್ಯ ಎನ್.ಕೆ(19) ಎಂದು ಗುರುತಿಸಲಾಗಿದೆ.
ತುಳುನಾಡಿನ ಬಾವುಟವನ್ನು ಎಡಿಟ್ ಮಾಡಿ, ತನ್ನ ಫೇಸ್ ಬುಕ್ ನಲ್ಲಿ ಹಾಕಿದ್ದ. ಮಾತ್ರವಲ್ಲದೆ ಅಶ್ಲೀಲವಾಗಿ ಕಮೆಂಟ್ ಹಾಕಿದ್ದ. ಪ್ರಕರಣದ ಗಂಭೀರತೆ ಅರಿತ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಶಶಿಧರ ಹೆಗ್ಡೆ ಪೊಲೀಸರಿಗೆ ದೂರು ನೀಡಿದ್ದರು. ತುಳು ಪಂಚದ್ರಾವಿಡ ಭಾಷೆಗಳಲ್ಲಿ ಒಂದಾಗಿದೆ. ತನ್ನದೇ ಆದ ಹಿರಿಮೆಯನ್ನು ಹೊಂದಿರುವುದಲ್ಲದೆ ತನ್ನದೇ ಆದ ಧ್ವಜವನ್ನು ಹೊಂದಿದೆ. ತುಳುನಾಡಿನ ಜನತೆಯ ಆರಾಧ್ಯ ದೃಷ್ಟಿಯಿಂದ ನೋಡುವ ಈ ಧ್ವಜಕ್ಕೆ ಅಪಮಾನ ಮಾಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಘಟನೆ ಇನ್ನೇನು ಕೈಮೀರುತ್ತಿದೆ ಎನ್ನುವಾಗಲೇ ಆರೋಪಿ ಚಪ್ಪಲಿಯಲ್ಲಿ ತುಳು ಧ್ವಜ ಬಳಸಿ ಅವಮಾನ ಮಾಡಿದ ಬಗ್ಗೆ ಸ್ಥಳೀಯ ವಾಹಿನಿಯೊಂದರಲ್ಲಿ ಕ್ಷಮೆಯಾಚಿಸಿದ್ದ. ಆದರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ತುಳು ಭಾಷಿಕರ ಪೊಲೀಸರು 153(ಎ) ಮತ್ತು505 (2) ಐಪಿಸಿ ಅಡಿ ಪ್ರಕರಣ ದಾಖಲಿಸಿದ್ದರು. ಆರೋಪಿಯ ಪತ್ತೆಗಾಗಿ ಬರ್ಕೆ ಠಾಣೆ ಎಸ್ಐ ಹಾರುಣ್ ಅಖ್ತರ್ ನೇತ್ರತ್ವದಲ್ಲಿ ಊರ್ವ ಪೊಲೀಸ್ ಠಾಣೆಯ ಸಿಬ್ಬಂದಿ ಪುಷ್ಪರಾಜ್, ಪ್ರಕಾಶ್ ಬರ್ಕೆ ಠಾಣೆ ಶರತ್ ಎಂಬವರನ್ನು ಒಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.
ಪೊಲೀಸ್ ತಂಡ ಬೆಂಗಳೂರಿಗೆ ತೆರಳಿ, ಆರೋಪಿ ಮನೆಯನ್ನು ಪತ್ತೆ ಮಾಡಿದೆ. ಆರೋಪಿ ಸೂರ್ಯ ಶ್ರೀರಾಂಪುರದಲ್ಲಿ ಒಂದನೇ ಕ್ರಾಸ್ ನಿವಾಸಿ ಯಾಗಿದ್ದನ್ನು ಪತ್ತೆ ಮಾಡಿ ಕಾರ್ಯಾಚರಣೆ ನಡೆಸಿ ಇಂದು ಮಂಗಳೂರಿಗೆ ಕರೆ ತಂದು ಕೋರ್ಟಿಗೆ ಹಾಜರು ಪಡಿಸಲಾಗಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪೋಲಿಸರು ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.