

ವೀರಕಂಭ ಗ್ರಾಮ ಪಂಚಾಯತ್ನಲ್ಲಿ ಈ ಹಿಂದೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಿಶಾಂತ್ ಎಂಬವರು ವೀರಕಂಭ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂಗಳಪದವು ಪೇಟೆಯ ಬಳಿ ಅನಧಿಕೃತ ಕಟ್ಟಡಗಳನ್ನು ನಿರ್ಮಿಸಿ ವ್ಯಾಪಾರ ಪರವಾನಿಗೆ ನೀಡಿದ್ದು, ಈ ಬಗ್ಗೆ ಸಾಮಾಜಿಕ ಹೋರಾಟಗಾರರಾದ ದೇವಿಪ್ರಸಾದ್ ಶೆಟ್ಟಿ ಬೆಂಞಣ್ತಿಮಾರ್ ಹಾಗೂ ಧನಂಜಯ ಪಾದೆಯವರು ಲೋಕಾಯುಕ್ತರಿಗೆ ದೂರು ನೀಡುವ ಬಗ್ಗೆ ಮಾತುಕತೆ ನಡೆಸಿದ್ದರು. ಪಿಡಬ್ಲ್ಯೂ ಇಲಾಖೆಯ ಅನುಮತಿ ಪಡೆಯದ ರಾಜ್ಯ ಹೆದ್ದಾರಿಯ ಬದಿಯಲ್ಲಿ ಅನಧಿಕೃತ ಕಟ್ಟಡಗಳನ್ನು ಕಟ್ಟಿ, ವ್ಯಾಪಾರ ಪರವಾನಿಗೆ ನೀಡಿರುವುದರ ಬಗ್ಗೆ ಪಿಡಬ್ಲ್ಯೂ ಇಲಾಖೆಗೆ ಪತ್ರ ಬರೆಯಲಾಗಿತ್ತು.
ಮಾಹಿತಿ ಪ್ರಕಾರ ಪಿಡಬ್ಲ್ಯೂ ಇಲಾಖೆ ವೀರಕಂಭ ಗ್ರಾಮ ಪಂಚಾಯತ್ ಗೆ ನೋಟೀಸ್ ನೀಡಲಾಗಿತ್ತು, ಆದರೂ ಈ ಬಗ್ಗೆ ವೀರಕಂಭ ಗ್ರಾಮ ಪಂಚಾಯತ್ ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮ ಪಂಚಾಯತ್ ನ ಮೌನವನ್ನು ವಿರೋಧಿಸಿ ಸಾಮಾಜಿಕ ಹೋರಾಟಗಾರರು ಲೋಕಾಯುಕ್ತರಿಗೆ ದೂರು ನೀಡುವ ಬಗ್ಗೆ ಮಾತುಕತೆ ನಡೆಸಿದ್ದರು. ಅಷ್ಟೇ ಅಲ್ಲದೆ ಮಾರ್ಚ್ ತಿಂಗಳಿನಿಂದ ಅಂಗಡಿ- ಕಟ್ಟಡಗಳು ಏಲಂ ಆಗದೇ ಇರುವುದರಿಂದ ಮತ್ತು ಕೊಟ್ಟ ಪರವಾನಿಗೆಯನ್ನು ನವೀಕರಣ ಮಾಡದೇ ಇರುವುದು ಈಗಿನ ವೀರಕಂಭ ಪಂಚಾಯತ್ ಪಿಡಿಒ ತಮ್ಮ ಹೆಗಲಿನಿಂದ ಜಾರುವ ಕೆಲಸಕ್ಕೆ ಕೈ ಹಾಕಿದ್ದಾರೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದು ಕರ್ತವ್ಯ ಲೋಪ ಎಂದು ಹೋರಾಟಗಾರರಾದ ದೇವಿಪ್ರಸಾದ್ ಶೆಟ್ಟಿ ಬೆಂಞಣ್ತಿಮಾರ್ ಹಾಗೂ ಧನಂಜಯ ಪಾದೆಯವರು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಂಗಳಪದವು ಪರಿಸರ ಅನೇಕ ಸಮಸ್ಯೆಗಳಿಗೆ ಸಾಕ್ಷಿಯಾಗಿದ್ದು, ಪಂಚಾಯತ್ನ ಕಡೆಗಣನೆ ಈ ರೀತಿಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದೆಂದು ಹೋರಾಟಗಾರರು ತಿಳಿಸಿದ್ದಾರೆ.