ಬಂಟ್ವಾಳ: ಕೇರಳದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮಂಜೇಶ್ವರದ ವರ್ಕಾಡಿ ಪಂಚಾಯತ್ ನಲ್ಲಿ ಸತತವಾಗಿ ಮೂರನೇ ಬಾರಿಗೆ ಅತ್ಯಧಿಕ ಮತಗಳಿಂದ ಗೆದ್ದು ಇದೀಗ ಪಂಚಾಯತ್ ನ ಅಧ್ಯಕ್ಷೆಯಾಗಿ ಆಯ್ಕೆಯಾದ ಭಾರತಿ ಸತೀಶ್ ಅವರನ್ನು, ಪ್ರೈಮರಿ ಗ್ರೂಪ್ 1990-91 ನ ಮೊಡಂಕಾಪು,ಬಂಟ್ವಾಳ ಇವರ ವತಿಯಿಂದ ವರ್ಕಾಡಿ ಗ್ರಾ.ಪಂ.ನಲ್ಲಿ ಸನ್ಮಾನಿಸಲಾಯಿತು.

1990-91 ರ ಇಸವಿಯಲ್ಲಿ ಕಲಿತ ಏಳನೆ ತರಗತಿಯ ಸಹಪಾಠಿ ಗಳ ಪ್ರೈಮರಿ ಗ್ರೂಪ್ ಮೊಡಂಕಾಪು ಎಂಬ ಮೊಬೈಲ್ ಗ್ರೂಪ್ ಆರಂಭಿಸಿದ್ದು ಅ ಗ್ರೂಪ್ ನ ಮೂಲಕ ಸಾಧನೆ ಮಾಡಿದ ಸಾಧಕರನ್ನು ಮತ್ತು ಶಿಕ್ಷಕರನ್ನು ಜೊತೆಗೆ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಅದೇ ಗ್ರೂಪ್ ನ ವತಿಯಿಂದ ವರ್ಕಾಡಿಯಲ್ಲಿ ಪ್ರಾಥಮಿಕ ಶಾಲಾ ಸಹಪಾಠಿ ಸ್ನೇಹಿತೆ ಭಾರತಿಯವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಭಾರತೀ ಪ್ರಾಥಮಿಕ ಶಾಲಾ ಸಹಪಾಠಿ ಗಳು ನನಗೆ ಸನ್ಮಾನ ಮಾಡಿದ್ದು ಅತೀವ ಸಂತಸ ಆಗಿದೆ, ಜೊತೆಗೆ ನನ್ನ ಜವಬ್ದಾರಿ ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡಲು ನಿಮ್ಮ ಪ್ರೀತಿ ಸಹಕಾರ ಸದಾ ನನಗೆ ಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಬಂಟ್ವಾಳ ಬೂಡ ಅಧ್ಯಕ್ಷ ಸದಾಶಿವ ಬಂಗೇರ ಭಾರತಿ ಪ್ರಾಥಮಿಕ ಶಾಲೆಯ ಸಹಪಾಠಿಯಾಗಿದ್ದು ಬಹುಮುಖ ಪ್ರತಿಭೆ, ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಂಡ ಪರಿಣಾಮ ಇಂದು ವರ್ಕಾಡಿ ಪಂಚಾಯತ ನ ಅಧ್ಯಕ್ಷರಾಗಿ ಆಯ್ಕೆಯಾಗಲು ಅವಕಾಶವಾಗಿದೆ ಎಂದರು.ಇವರ ಅವಧಿಯಲ್ಲಿ ವರ್ಕಾಡಿ ಗ್ರಾ.ಪಂ.ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಅವರು ಹಾರೈಸಿದರು.

ಈ ಸಂದರ್ಭದಲ್ಲಿ ಸಹಪಾಠಿಗಳಾದ ಅಕ್ಬರ್ ಆಲಿ, ಮಹಮ್ಮದ್ ಶಮೀರ್, ಜಗದೀಶ್ ಹಾಗೂ ವರ್ಕಾಡಿ ಉಪಾಧ್ಯಕ್ಷ ಅಬುಬಕ್ಕರ್ ಸಿದ್ದೀಕ್, ಸದಸ್ಯ ಶಿವರಾಜ್ ಮತ್ತು ಗ್ರಾ.ಪಂ.ಸಿಬ್ಬಂದಿ ಗಳು ಉಪಸ್ಥಿತರಿದ್ದರು.
