Saturday, June 28, 2025
spot_imgspot_img
spot_imgspot_img

ಸ್ಥಳೀಯ ಸಂಸ್ಥೆಗಳ ಪ್ರತಿನಿಧಿತ ವಿಧಾನ ಪರಿಷತ್ ಉಪ ಚುನಾವಣೆ ಬಿಜೆಪಿ ಪ್ರಮುಖರ ಸಭೆ

- Advertisement -
- Advertisement -

ಪುತ್ತೂರು ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರದ ಸ್ಥಾನಕ್ಕೆ ಒಕ್ಟೋಬರ್ 21 ರಂದು ನಡೆಯುವ ಉಪಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಪ್ರಮುಖರ ಪೂರ್ವಭಾವಿ ಸಭೆಯು ಮುರ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.

ನಮ್ಮದೇ ಕ್ಷೇತ್ರ ಮತ್ತೆ ನಮ್ಮ ಅಭ್ಯರ್ಥಿ ಗೆದ್ದು ನಮ್ಮದಾಗ ಬೇಕು : ಕ್ಯಾಪ್ಟನ್ ಗಣೇಶ್ ಕಾರ್ಣಿಕ್
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ಉಡುಪಿ – ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರದ ವಿಧಾನ ಪರಿಷತ್ ಸದಸ್ಯರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಉಡುಪಿ – ಚಿಕ್ಕಮಗಳೂರು ಲೋಕಸಭಾ ಸದಸ್ಯರಾಗಿ ಚುನಾಯಿತರಾದ ಹಿನ್ನೆಲೆಯಲ್ಲಿ ಅವರಿಂದ ತೆರವಾದ ಈ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದೆ. ನಮ್ಮ ಬಿಜೆಪಿ ಯ ಸದಸ್ಯರೇ ಆಗಿದ್ದ ಈ ಕ್ಷೇತ್ರವನ್ನು ಮತ್ತೆ ಬಿಜೆಪಿ ಸದಸ್ಯರೇ ಆಯ್ಕೆಯಾಗುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಬ್ದಾರಿ ಎಂದು ಹೇಳಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಪುತ್ತೂರು ವಿಧಾನ ಸಭಾ ಕ್ಷೇತ್ರದ ಚುನಾವಣಾ ಸಂಚಾಲಕ ನಿತೀಶ್ ಕುಮಾರ್ ಶಾಂತಿವನ ಈ ಚುನಾವಣೆ ನಮಗೆಲ್ಲರಿಗೂ ಒಂದು ಸವಾಲಿನ ಚುನಾವಣೆ ನಾವೆಲ್ಲರೂ ಒಟ್ಟಾಗಿ-ಒಂದಾಗಿ ಈ ಚುನಾವಣೆ ಎದುರಿಸಬೇಕು. ಸ್ಥಳೀಯ ಜನಪ್ರತಿನಿಧಿಗಳಗೆ ಮಾತ್ರ ಮತದಾನ ದ ಅವಕಾಶ ಇರುವುದಾದರೂ ನಾವೆಲ್ಲ ಕಾರ್ಯಕರ್ತರು ಈ ಕಾರ್ಯದಲ್ಲಿ ಕೈ ಜೋಡಿಸಿ ಪುತ್ತೂರು ಬಿಜೆಪಿಯ ಭದ್ರಕೋಟೆ ಎಂಬುವುದನ್ನು ಸಾಭಿತುಪಾಡೆಸಬೇಕಾಗಿದೆ ಎಂದರು…

ಒಬ್ಬ ರಾಷ್ಟ್ರಭಕ್ತ ಕಾರ್ಯಕರ್ತನನ್ನು ಜನಪ್ರತಿನಿಧಿಯಾಗಿಸುವ ಚುನಾವಣೆ : ಲೋಕಸಭಾ ಸದಸ್ಯರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ
ಲೋಕಸಭಾ ಸದಸ್ಯರಾದ ಕ್ಯಾಪ್ಟನ್ ಬ್ರಿಜೇಶ್ ಚೌಟರವರು ಮಾತನಾಡಿ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಭಾಗವಹಿಸುವ ಈ ಚುನಾವಣೆ ಪುತೂರಿನ ಮಟ್ಟಿಗೆ ಬಹಳ ಪ್ರಾಮುಖ್ಯವಾದ ಚುನಾವಣೆ , ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಪುತ್ತೂರಿನವರೇ ಆದ ಯುವ ತರುಣ ಕಿಶೋರ್ ಕುಮಾರ್ ಪುತ್ತೂರು ಕಣದಲ್ಲಿ ಇದ್ದು ಅದರಲ್ಲೂ ವಿಶೇಷವಾಗಿ ಎಲ್ಲಿ ಭಾರತದ ಧ್ವಜ ಹಾರಿಸಲು ಸವಾಲಿತ್ತೋ ಅದೇ ಸವಾಲನ್ನು ಮೆಟ್ಟಿನಿಂತು ಬಿಜೆಪಿ ಯುವಮೋರ್ಛ ದ ಕಾಶ್ಮೀರ್ ಚಲೋ ಎಂಬ ಕಾರ್ಯಕ್ರಮದ ಮೂಲಕ ಕಾಶ್ಮೀರದ ಲಾಲ್ ಚೌಕ್ ನಲ್ಲಿ ಭಾರತದ ತಿರಂಗವನ್ನು ಹಾರಿಸಿದ ದೇಶಭಕ್ತ ಯುವಕನನ್ನು ಜನಪ್ರತಿನಿಧಿಯಾಗಿ ಮೊತ್ತ ಮೊದಲ ಬಾರಿಗೆ ವಿಧಾನ ಪರಿಷತ್ ಗೆ ಪುತ್ತೂರಿನಿಂದ ಕಳಿಸಿಕೊಡಬೇಕು. ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಅತ್ಯಂತ ಹೆಚ್ಚು ಮತಗಳು ಲಭಿಸುವಂತೆ ಪುತ್ತೂರಿನ ಕಾರ್ಯಕರ್ತರು ಶ್ರಮವಹಿಸಬೇಕಾಗಿದೆ ಎಂದು ಹೇಳಿದರು.


ಕಾಂಗ್ರೆಸ್ ನ ಓಲೈಕೆ ರಾಜಕಾರಣದ ವಿರುದ್ಧ ಅಭೂತಪೂರ್ವ ಗೆಲುವು : ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್
ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಮಾತನಾಡಿ ಈ ಚುನಾವಣೆಯ ಗೆಲುವು ಯಾವ ರೀತಿಯಲ್ಲಿ ಇರಬೇಕೆಂದರೆ ಇವತ್ತು ರಾಜ್ಯದ ಇತಿಹಾಸದಲ್ಲಿ ಅತ್ಯಂತ ಭ್ರಷ್ಟ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಗೆ ಪಾಠದ ರೀತಿಯಲ್ಲಿ ಇರಬೇಕು. ಕಾಂಗ್ರೆಸ್ ನ ಓಲೈಕೆ ರಾಜಕಾರಣದ ವಿರುದ್ಧ ಪಡೆಯುವ ಅಭೂತಪೂರ್ವ ಗೆಲುವು ಆಗಬೇಕು. ಈ ಬಾರಿಯ ಪರಿಷತ್ ಚುನಾವಣೆ ಪುತ್ತೂರಿಗೆ ಬಾರಿ ವಿಶೇಷವಾದ ಚುನಾವಣೆ ಅಭ್ಯರ್ಥಿ ಪುತ್ತೂರಿನ ಯುವ ನಾಯಕ ಕಿಶೋರ್ ಕುಮಾರ್ ಆಗಿರುವುದರಿಂದ ಈ ಗೆಲುವು ದೇಶಾದ್ಯಂತ ಮುಂದಿನ ಚುನಾವಣೆಗಳಲ್ಲಿ ನಮ್ಮ ಬಿಜೆಪಿ ಕಾರ್ಯಕರ್ತರಿಗೆ ಒಂದು ರೀತಿಯ ವಿಶೇಷ ಉತ್ಸಾಹ ತುಂಬುವ ರೀತಿಯಲ್ಲಿ ಗೆಲ್ಲಲೇ ಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಮಾತನಾಡಿ ಈ ಚುನಾವಣೆ ಬಹಳ ಪ್ರಾಮುಖ್ಯತೆ ಯ ಚುನಾವಣೆ , ನೂತನ ಪದಾಧಿಕಾರಿಗಳ ತಂಡಕ್ಕೆ ಮೊದಲ ಚುನಾವಣೆ ಈ ನಿಟ್ಟಿನಲ್ಲಿ ಹಿರಿಯರು , ಕಿರಿಯರು ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ಸಲುವಾಗಿ ಪ್ರತಿ ಪಂಚಾಯತ್ ವಾರು ಒಬ್ಬ ಮಂಡಲ ಪ್ರಮುಖರನ್ನು ಸೇರಿಸಿ 3 ಜನರ ತಂಡವನ್ನು ರಚಿಸಲಾಗಿದೆ. ನಾಳೆಯಿಂದಲೇ ಚುನಾವಣೆ ಸಲುವಾಗಿನ ಕೆಲಸದಲ್ಲಿ ತೊಡಗಿಕೊಳ್ಳಬೇಕು ಎಂದು ಪಂಚಾಯತ್ ವಾರು ಪ್ರಮುಖರನ್ನು ಘೋಷಣೆ ಮಾಡಿದರು. ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ ಬಿ ನಗರಸಭೆಗೆ ಪ್ರಮುಖರನ್ನು ಘೋಷಣೆ ಮಾಡಿದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ , ಚುನಾವಣಾ ಜಿಲ್ಲಾ ಸಹ ಸಂಚಾಲಕರಾದ ರಾಕೇಶ್ ರೈ ಕೆಡೆಂಜಿ ಚುನಾವಣಾ ಕೆಲಸ ಕಾರ್ಯಗಳ ರೂಪುರೇಷೆಗಳು ಹಾಗೂ ಮಾಡಬೇಕಾದ ಕಾರ್ಯಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.

ನಿಕಟಪೂರ್ವ ಶಾಸಕರಾದ ಸಂಜೀವ ಮಠಂದೂರು , ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ , ಕಾರ್ಯದರ್ಶಿ ವಿದ್ಯಾಗೌರಿ , ರಾಜ್ಯ ಹಿಂದುಳಿದ ಮೋರ್ಛ ಕಾರ್ಯದರ್ಶಿ ಆರ್.ಸಿ.ನಾರಾಯಣ , ಜಿಲ್ಲಾ ಎಸ್ ಟಿ ಮೋರ್ಛ ಅಧ್ಯಕ್ಷ ಹರೀಶ್ ಬಿಜತ್ರೆ , ಪುತ್ತೂರು ಬಿಜೆಪಿ ಮಂಡಲ ಪ್ರಭಾರಿಗಳಾದ ಸುನಿಲ್ ಆಳ್ವ , ಚುನಾವಣಾ ಸಹಸಂಚಾಲಕ ಸಂತೋಷ್ ಕುಮಾರ್ ಕೈಕಾರ , ನಗರ ಸಭೆ ಅದ್ಯಕ್ಷೆ ಲೀಲಾವತಿ ಕೃಷ್ಣನಗರ ವೇದಿಕೆಯಲ್ಲಿದ್ದರು. ಪ್ರಮುಖರಾದ ಅಪ್ಪಯ್ಯ ಮಣಿಯಾಣಿ , ಚನಿಲ ತಿಮ್ಮಪ್ಪ ಶೆಟ್ಟಿ , ಚಂದ್ರಶೇಖರ್ ರಾವ್ ಬಪ್ಪಳಿಗೆ , ಬೂಡಿಯಾರ್ ರಾಧಾಕೃಷ್ಣ ರೈ , ಜೀವಂದರ್ ಜೈನ್ , ಮುರಳೀಕೃಷ್ಣ ಹಸಂತಡ್ಕ , ರಾಧಾಕೃಷ್ಣ ಬೋರ್ಕರ್ ಸೇರಿದಂತೆ ಬಿಜೆಪಿ ನಗರ ಹಾಗೂ ಗ್ರಾಮಾಂತರ ಮಂಡಲ ಪದಾಧಿಕಾರಿಗಳು , ನಿಕಟಪೂರ್ವ ಪದಾಧಿಕಾರಿಗಳು , ವಿವಿಧ ಮೋರ್ಛಗಳ ಪದಾಧಿಕಾರಿಗಳು , ಮಹಾಶಕ್ತಿಕೇಂದ್ರಗಳ ಅಧ್ಯಕ್ಷ , ಕಾರ್ಯದರ್ಶಿಗಳು , ಶಕ್ತಿಕೇಂದ್ರ ಪ್ರಮುಖರು ಹಾಗೂ ಅಪೇಕ್ಷಿತ ಪ್ರಮುಖ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.

ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು ಸ್ವಾಗತಿಸಿ , ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ ಧನ್ಯವಾದವಿತ್ತರು‌. ಗ್ರಾಮಾಂತರ ಮಂಡಲದ ಸುನಿಲ್ ದಡ್ಡು ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!