ನವದೆಹಲಿ: ಇಂದು ಬಾಂಗ್ಲಾದೇಶ ವಿಮೋಚನಾ ದಿನ. 1971ರಲ್ಲಿ ಭಾರತೀಯ ಸೇನಾ ಪಡೆ ಪಾಕಿಸ್ತಾನದಿಂದ ಬಾಂಗ್ಲಾದೇಶವನ್ನು ವಿಮುಕ್ತಿಗೊಳಿಸುವಲ್ಲಿ ಯಶಸ್ವಿಯಾದ ದಿನವಿದು. ಹೀಗಾಗಿ ಪ್ರತಿ ವರ್ಷ ಡಿಸೆಂಬರ್ 16ನ್ನು ವಿಜಯ ದಿವಸ್ ವಾಗಿ ಆಚರಿಸಲಾಗುತ್ತದೆ.
ಮಿಲಿಟರಿ ಇತಿಹಾಸದಲ್ಲೇ ಅತ್ಯಂತ ಚಿಕ್ಕ ಹಾಗೂ ವೇಗವಾಗಿ ನಡೆದ ಯುದ್ಧ ಅಂದ್ರೆ ಅದು 1971ರ ಭಾರತ-ಪಾಕಿಸ್ತಾನ ಯುದ್ಧ. ಭಾರತೀಯ ಸೇನಾಪಡೆ ಪಾಕಿಸ್ತಾನವನ್ನ ಮಣಿಸಿದ ಪರಿಣಾಮ ಬಾಂಗ್ಲಾದೇಶ ಒಂದು ಹೊಸ ರಾಷ್ಟ್ರವಾಗಿ ಉಗಮವಾಯ್ತು. 49 ವರ್ಷಗಳ ಹಿಂದೆ ಈ ದಿನ 93 ಸಾವಿರ ಪಾಕ್ ಸೈನಿಕರು ಶರಣಾಗುವಂತೆ ಮಾಡಿತ್ತು ನಮ್ಮ ಭಾರತೀಯ ಸೇನೆ.
ಎರಡನೇ ಮಹಾಯುದ್ಧದ ನಂತರ ನಡೆದ ಅತೀ ಹೆಚ್ಚು ಸಂಖ್ಯೆಯ ಸೈನಿಕರ ಶರಣಾಗತಿ ಇದಾಗಿತ್ತು. ಇದು ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಸಿಕ್ಕ ಅತೀ ದೊಡ್ಡ ವಿಜಯಗಳಲ್ಲಿ ಒಂದು. ಈ ವಿಜಯೋತ್ಸವಕ್ಕೆ ಇಂದು 50ನೇ ವಾರ್ಷಿಕೋತ್ಸವ.
ಈ ಹಿನ್ನೆಲೆ ಇಂದು ಪ್ರಧಾನಿ ಮೋದಿ, ದೆಹಲಿಯಲ್ಲಿರೋ ರಾಷ್ಟ್ರೀಯ ವಾರ್ ಮೆಮೋರಿಯಲ್ನಲ್ಲಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು. ಇದೇ ವೇಳೆ ಅವರು ಸ್ವರ್ಣಿಂ ವಿಜಯ್ ಮಾಶಾಲ್(ವಿಜಯ ಜ್ಯೋತಿ) ಬೆಳಗಿಸಿದರು.ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್, ಸಶಸ್ತ್ರಪಡೆ, ನೌಕಾಪಡೆ ಹಾಗೂ ವಾಯುಪಡೆಯ ಮುಖ್ಯಸ್ಥರು ಹುತಾತ್ಮ ಯೋಧರಿಗೆ ಗೌರವನಮನ ಸಲ್ಲಿಸಿದರು.
ರಾಷ್ಟ್ರೀಯ ಯುದ್ಧ ಸ್ಮಾರಕದ ಅಮರ ಜ್ಯೋತಿಯಿಂದ ನಾಲ್ಕು ಮಾಶಾಲ್(ಜ್ಯೋತಿ)ಗಳನ್ನ ಇಂದು ಬೆಳಗಿಸಲಾಗಿದೆ. ಇದನ್ನ 1971ರ ಯುದ್ಧದ ಪರಮವೀರ ಚಕ್ರ ಹಾಗೂ ಮಹಾವೀರ ಪ್ರಶಸ್ತಿ ಪುರಸ್ಕೃತರ ಗ್ರಾಮಗಳು ಸೇರಿದಂತೆ ದೇಶದ ವಿವಿಧ ಭಾಗಗಳಿಗೆ ಕೊಂಡೊಯ್ಯಲಾಗುತ್ತದೆ.ಈ ಪ್ರಶಸ್ತಿ ಪುರಸ್ಕೃತರು ಹುಟ್ಟಿದ ನೆಲದ ಮಣ್ಣು ಹಾಗೂ 1971ರಲ್ಲಿ ಪ್ರಮುಖ ಯುದ್ಧಗಳು ನಡೆದ ಪ್ರದೇಶಗಳ ಮಣ್ಣನ್ನು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆಗೆದುಕೊಂಡು ಬರಲಾಗುತ್ತಿದೆ ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.