ವಿಜಯಪುರ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಜಮ್ಮಲದಿನ್ನಿ ಕ್ರಾಸ್ ಬಳಿಯ ಇಣಚಗಲ್ ಸೇತುವೆ ಕೆಳಗೆ ಯುವತಿಯ ಶವ ಪತ್ತೆಯಾಗಿದ್ದು, ಈ ಪ್ರಕರಣವನ್ನು ಭೇದಿಸಿದ ಪೊಲೀಸರಿಗೆ ಯುವತಿಯ ಕೊಲೆಯನ್ನು ಸೋದರಮಾವನೆ ಮಾಡಿದ್ದಾನೆಂದು ತಿಳಿದುಬಂದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ಯುವತಿಯನ್ನು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸ್ ಠಾಣಾ ವ್ಯಾಪ್ತಿಯ ಬಳುಂಡಗಿ ಗ್ರಾಮದ ಆರತಿ ಮಲ್ಲಪ್ಪ ಬಿಲ್ಲಾಡ (17) ಎಂದು ಗುರುತಿಸಿದ್ದಾರೆ. ಆರೋಪಿ ಸೋದರಮಾವ ಸಿದ್ರಾಮಪ್ಪ ಕಲ್ಲಪ್ಪ ಅವಟಿ (43) ಬಂಧಿಸಿದ್ದಾರೆ.
ಕೊಲೆಯಾಗಿರುವ ಯುವತಿಗೆ ತಂದೆಯಿಲ್ಲ, ತಾಯಿ ಇದ್ದು ಮನೆಯ ಆಗುಹೋಗುಗಳನ್ನು ಬಾಲಕಿಯ ಸೋದರ ಮಾವ ಸಿದ್ದರಾಮಪ್ಪನೇ ನೋಡಿಕೊಳ್ಳುತ್ತಿದ್ದನು. ಆರತಿ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದು, ಇಬ್ಬರು ಜೊತೆಗಿರುವ ಫೋಟೋವನ್ನು ಆಕೆಯ ಪ್ರಿಯತಮ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ಇದನ್ನು ನೋಡಿ ಕೋಪಗೊಂಡಿದ್ದ ಸಿದ್ರಾಮಪ್ಪ, ಕೂಡಲ ಸಂಗಮದಲ್ಲಿ ಮದುವೆ ಮಾಡಿಸುವುದಾಗಿ ಆರತಿಯನ್ನು ರಾತ್ರಿ ಮನೆಯಿಂದ ಕರೆದುಕೊಂಡು ಹೋಗಿ ಜಮ್ಮಲದಿನ್ನಿ ಕ್ರಾಸ್ ಬಳಿ ಕೊಲೆ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಕೊಲೆಯಾದ ದಿನದಿಂದ ದೇವರಹಿಪ್ಪರಗಿಯ ಮಲ್ಲಯ್ಯನ ಗುಡಿಯಲ್ಲಿ ತಲೆಮರೆಸಿಕೊಂಡಿದ್ದನು. ಮಾಹಿತಿ ಆಧರಿಸಿ ತನಿಖೆ ನಡೆಸಿದ ಎಸ್ಐ ವಿನೋದ ದೊಡ್ಡಮನಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.