ಬೆಂಗಳೂರು: ಮೆಡಿಸಿನ್ ತಯಾರಿಸುವ ಪ್ರಸಿದ್ದ ಕಂಪನಿಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯದಿಂದ ಇಡೀ ಹಳ್ಳಿಗೆ ಕಂಟಕ ಎದುರಾಗಿದೆ. ಪಶು, ಪಕ್ಷಿಗಳ ಜೀವಸಂಕುಲ ಹಾಗೂ ಜಲಚರಗಳ ಪ್ರಾಣಕ್ಕೂ ಸಂಕಟ ಎದುರಾಗಿದೆ.
ಕೆರೆಯಂಚಿನಲ್ಲೇ ಇರುವ ಬೃಹತ್ ಔಷಧ ತಯಾರಿಕಾ ಘಟಕದಿಂದ ಕೆರೆಗೆ ಪೈಪ್ಗಳ ಮೂಲಕ ಕಡುಗಪ್ಪು ಬಣ್ಣದ ವಿಷಯುಕ್ತ ನೀರು, ಸಂಪೂರ್ಣ ಕಲುಷಿತವಾಗಿರುವ ನೀರು ಧುಮ್ಮಿಕ್ಕುತ್ತಿದ್ದು, ಕಲುಷಿತ ನೀರನ್ನು ಕುಡಿದು ಕರು, ಮೇಕೆಗಳು ಸತ್ತಿರುವ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಹುರುಳಿಹಳ್ಳಿಯ ಗ್ರಾಮದ ಕೆರೆಯ ಹಂಚಿಗೆ ಹೊಂದಿಕೊಂಡಿರುವ ವಿನ್ಟಾಕ್ ಔಷಧ ತಯಾರಿಕಾ ಘಟಕದಿಂದ ಭಾರೀ ಮೊತ್ತದ ವಿಷಯುಕ್ತ ಕಲುಷಿತ ನೀರು ದೊಡ್ಡ ದೊಡ್ಡ ಪೈಪ್ಗಳ ಮುಖಾಂತರ ರಾತ್ರಿ ವೇಳೆ ಕೆರೆಗೆ ಹರಿಯ ಬಿಡಲಾಗುತ್ತಿದೆ.
ಇತ್ತೀಚೆಗೆ ಇದೇ ಕೆರೆಯ ನೀರು ಕುಡಿದು ಕರು ಹಾಗೂ ಮೇಕೆಗಳು ಪ್ರಾಣ ಕಳೆದುಕೊಂಡಿದೆ. ಅಲ್ಲದೆ, ಈ ಹಿಂದೆ ಕೆರೆಯಲ್ಲಿ ಭಾರೀ ಮೀನುಗಳಿದ್ದು ನೀರು ಕಲುಷಿತಗೊಂಡ ನಂತರ ಜಲಚರಗಳು ಸಾವನ್ನಪ್ಪಿ ಕೆರೆಯಂಗಳ ಬರಿದಾಗಿದೆ. ಸುತ್ತಮುತ್ತಲಿನ ಭೂಮಿಯಲ್ಲಿನ ಕೃಷಿ ಚಟುವಟಿಕೆಗಳಿಗೂ ಕಲುಷಿತ ನೀರಿನಿಂದ ಭಾರೀ ತೊಂದರೆಯಾಗುತ್ತಿದೆ.
ರೈತ ಬಿತ್ತಿದ ಬೀಜ ಫಲ ಕೊಡುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಔಷಧೀ ತಯಾರಿಕಾ ಘಟಕದ ವಿರುದ್ದ ಬೂದಿಹಾಲ್ ಗ್ರಾಮ ಪಂಚಾಯ್ತಿಗೆ ಸ್ಥಳೀಯರು ದೂರು ನೀಡಿದ್ದು ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ. ಅಲ್ಲದೆ, ಈ ಬಗ್ಗೆ ವಿನ್ಟಾಕ್ ಆಡಳಿತ ಮಂಡಳಿಯವರನ್ನು ಪ್ರಶ್ನಿಸಿದರೆ ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ.