ವಿಟ್ಲದ ಚಂದಳಿಕೆ, ಕನ್ಯಾನ, ಕಂಬಳಬೆಟ್ಟು, ವಿಟ್ಲ ಭಾಗದಲ್ಲಿ ಆಚರಣೆ
ವಿಟ್ಲ: ನಾಡಿನೆಲ್ಲೆಡೆ ಗಣೇಶ ಚತುರ್ಥಿ ಪ್ರಯುಕ್ತ ವಿಟ್ಲ ಪರಿಸರದಲ್ಲಿ ವಿವಿಧ ಗಣೇಶೋತ್ಸವ ಸಮಿತಿ ವತಿಯಿಂದ ಸರ್ಕಾರದ ನಿಯಮದಂತೆ ಗಣೇಶ ಮೂರ್ತಿ ಪ್ರತಿಷ್ಟಾಪಿಸಿ ಪೂಜಿಸಿ, ಗಣೇಶೋತ್ಸವ ಆಚರಿಸಿದರು.
ಚಂದಳಿಕೆ ಕಾರ್ತಿಕ್ ಫ್ರೆಂಡ್ಸ್ ವತಿಯಿಂದ ಚಂದಳಿಕೆ ಮಂಗಳಾ ಮಂಟಪದಲ್ಲಿ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಬೆಳಿಗ್ಗೆ ೧೨ಕಾಯಿಗಳ ಗಣಪತಿ ಹೋಮ, ಮೂರ್ತಿ ಪ್ರತಿಷ್ಠೆ. ಬೆಳಗಿನ ಪೂಜೆ, ಧ್ವಜಾರೋಹಣ ಹಾಗೂ ದೀಪ ಬೆಳಗಿಸಿ ಉದ್ಘಾಟಿಸಲಾಯಿತು. ಭಜನೆ, ಮಹಾಪೂಜೆ, ರಂಗಪೂಜೆ ಮಹಾಪೂಜೆ ಪ್ರಸಾದ ವಿತರಣೆ ನಡೆಯಿತು. ಬಳಿಕ ವಿಸರ್ಜನಾ ಪೂಜೆ ನಡೆಸಿ ಮೂರ್ತಿಯನ್ನು ವಿಸರ್ಜಿಸಲಾಯಿತು.
ಅದೇ ರೀತಿ ವಿಟ್ಲದ ಕನ್ಯಾನ ಭಾರತ ಸೇವಾಶ್ರಮ, ಕಂಬಳಬೆಟ್ಟು ಶ್ರೀ ದುರ್ಗಾ ಭಜನಾ ಮಂದಿರದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಿ, ಪೂಜಿಸಲಾಯಿತು. ವಿಟ್ಲ ವಿಶ್ವ ಹಿಂದೂ ಪರಿಷತ್ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ವಿಟ್ಲ ಶ್ರೀ ಪಂಚಲಿಂಗೇಶ್ವರ ಸಭಾ ಭವನದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಿ ಪೂಜಿಸಲಾಯಿತು.
ಪ್ರತಿವರ್ಷ ಈ ಭಾಗದಲ್ಲಿ ಎರಡು ಮೂರು ದಿನಗಳ ಕಾಲ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಿ ಪೂಜೆ ಸಲ್ಲಿಸುತ್ತಿದ್ದರು. ಇದರ ನಡುವೆ ಆಟೋಟ ಸ್ಪರ್ಧೆ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಈ ಬಾರಿ ಕೊರೊನಾ ಮಹಾಮಾರಿಯಿಂದ ಸರ್ಕಾರದ ನಿಯಮದಂತೆ ಸರಳ ರೀತಿಯಲ್ಲಿ ಆಚರಿಸಲಾಯಿತು.